ADVERTISEMENT

ಬಾಗಲಕೋಟೆ | ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:06 IST
Last Updated 8 ಫೆಬ್ರುವರಿ 2026, 3:06 IST
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಾಗಲಕೋಟೆಯಲ್ಲಿ ಶನಿವಾರ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದರು
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಾಗಲಕೋಟೆಯಲ್ಲಿ ಶನಿವಾರ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಶನಿವಾರ ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ಪ್ರತಿಭಟನೆ ಮಾಡಿದರು. ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಸಚಿವ ತಿಮ್ಮಾಪುರ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅಬಕಾರಿ ಲೈಸನ್ಸ್ ಪಡೆಯಲು ಎಷ್ಟೆಷ್ಟು ಲಂಚ ಕೊಡಬೇಕು ಎನ್ನುವ ರೇಟ್ ಬೋರ್ಡ್ ಪ್ರದರ್ಶಿಸಿದರು. ಭ್ರಷ್ಟ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ ಮತ್ತಿತರರು ಮಾತನಾಡಿ, ಜಗದೀಶ ಗುಡಗುಂಟಿ ಮತ್ತಿತರರು ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಅಬಕಾರಿ ಸಚಿವ ತಿಮ್ಮಾಪುರ ವಿರುದ್ಧ ಭ್ರಷ್ಟಾಚಾರದ ಆರೋಪ, ಅವರ ಹೆಸರು ಹೇಳಿರುವ ಆಡಿಯೊ ಸಿಕ್ಕಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿಗೂ ಪಾಲು ಹೋಗುತ್ತಿರುವುದರಿಂದ ಸಚಿವರನ್ನು ಕಾಪಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ. ಇವರ ಕಮಿಷನ್ ದಂಧೆಗೆ ಮದ್ಯ ಮಾರಾಟಗಾರರು ಹೈರಾಣಾಗಿ ಹೋಗಿದ್ದಾರೆ. ಐದು ಗ್ಯಾರಂಟಿಗಳ ಜೊತೆಗೆ ಹಳ್ಳಿ, ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದೂ 6ನೇ ಗ್ಯಾರಂಟಿಯಾಗಿದೆ. ಭ್ರಷ್ಟಾಚಾರ ನಡೆಸಿ ಅದಕ್ಕೆ ಜಾತಿ ಹೆಸರೇಳಿ ಉಳಿದಿಕೊಳ್ಳಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.

ಅಬಕಾರಿ ಸಚಿವ ತಿಮ್ಮಾಪುರ ಭಾವಚಿತ್ರ ಇರುವ ಪೋಸ್ಟರ್‌ಗಳಲ್ಲಿ ಸಿಎಲ್-9 ನಿಂದ ಒಟ್ಟು 92 ಕೋಟಿ, ಸಿಎಲ್-7 ಪಡೆಯಲು 1.25 ಕೋಟಿ, ಮಿನಿ ಬ್ರಿವರಿ ಲೈಸನ್ಸ್‌ಗೆ ₹2.5 ಕೋಟಿ ಲಂಚ ಕೊಡಬೇಕು ಎಂದು ಪಟ್ಟಿ ಹಾಕಿ ಪ್ರದರ್ಶಿಸಿದರು. ಸಚಿವ ತಿಮ್ಮಾಪುರ ರಾಜೀನಾಮೆಗಾಗಿ ಈಗಾಗಲೇ ಸದನದಲ್ಲಿ ಆಹೋರಾತ್ರಿ ಧರಣಿ ನಡೆಸಲಾಗಿದೆ.. ಈಗ ಸದನದ ಹೊರಗಡೆಯೂ ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯಮಂತ್ರಿ ಸಚಿವರ ರಾಜೀನಾಮೆ ಪಡೆಯುವವರೆಗೂ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಸಿದ್ದು ಸವದಿ, ಜಗದೀಶ ಗುಡಗುಂಟಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಪಕ್ಷದ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಅರುಣ ಶಹಪುರ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎಂ.ಕೆ.ಪಟ್ಟಣಶೆಟ್ಟಿ, ದೊಡ್ಡನಗೌಡ ಪಾಟೀಲ, ರಾಜಶೇಖರ ಶೀಲವಂತ, ಮುಖಂಡರಾದ ಹೂವಪ್ಪ ರಾಠೋಡ, ಅರುಣ ಕಾರಜೋಳ, ಮುತ್ತಣ್ಣ ಬೆಣ್ಣೂರ ಮಾತನಾಡಿದರು. ರಾಜು ನಾಯ್ಕರ್, ಶಿವಾನಂದ ಟವಳಿ, ಶಶಿಕಲಾ ಮಜ್ಜಗಿ, ಗಿರೀಶ ಭಾಂಡಗೆ, ವೀರಣ್ಣ ಹಳೇಗೌಡರ, ಶ್ರೀನಾಥ ಸಜ್ಜನ ಇದ್ದರು.

ಸಿದ್ದರಾಮಯ್ಯರಿಂದ ಸಚಿವರ ರಕ್ಷಣೆ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಳ ಸರ್ಕಾರದ ವಿರುದ್ಧ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.