
ಹುನಗುಂದ: ಮೋಟಾರ್ ಸೈಕಲ್ ಕಳ್ಳತನದ ಜಾಲ ಬೆನ್ಹತ್ತಿದ ಹುನಗುಂದ ಪೊಲೀಸರು ಕಳ್ಳತನವಾಗಿದ್ದ 27 ಮೋಟಾರ್ ಸೈಕಲ್ಗಳನ್ನು ವಶಕ್ಕೆ ಪಡೆದುಕೊಂಡು ಇದರಲ್ಲಿ ಭಾಗಿಯಾದ ಮೂವರ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹುನಗುಂದ ಪೊಲೀಸ್ ಠಾಣೆಯಲ್ಲಿ ಸೋಮವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಬೈಕ್ ಕಳೆದುಕೊಂಡಿದ್ದ ತಾಲ್ಲೂಕಿನ ಹಡಗಲಿ ಗ್ರಾಮದ ಸಂಗಪ್ಪ ಬಸಪ್ಪ ಅಂಗಡಿ ನೀಡಿದ ದೂರಿನ ಮೇರೆಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ. ಸಂತೋಷ ಬನ್ನಟ್ಟಿ, ಸಿಪಿಐ. ಎಸ್.ಬಿ. ಆಜೂರ ಮಾರ್ಗದರ್ಶನದಲ್ಲಿ ಪಿಎಸ್ಐ. ಎಸ್.ಜಿ. ಆಲದಕಟ್ಟಿ ನೇತೃತ್ವದ ತಂಡ ಈ ಕುರಿತು ತನಿಖೆ ಕೈಗೊಂಡಿತ್ತು ಎಂದರು.
ಬೈಕ್ ಕಳ್ಳತನ ಪ್ರಕರಣದಲ್ಲಿ ಅಮೀನಗಡ ಪೊಲೀಸ್ರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದ ಯಾದಗಿರಿ ಜಿಲ್ಲೆ ಸುರಪೂರ ತಾಲ್ಲೂಕಿನ ಸತ್ಯಂಪೇಟೆ ಗ್ರಾಮದ ಹುಲಗಪ್ಪ ಹನಮಂತ ಮೋಡಕೇರ (22) ಈತನನ್ನ ಪಿಸಿ. ಕಸ್ಟಡಿ ಮೇಲೆ ವಶಕ್ಕೆ ಪಡೆದು ವಿಚಾರಣೆ ಕೈಗೊಂಡ ಸಂದರ್ಭದಲ್ಲಿ ನೀಡಿದ ಮಾಹಿತಿ ಮೇರೆಗೆ ರಾಯಚೂರು ಜಿಲ್ಲೆ ದೇವದುರ್ಗ ಮೂಲದ ಹಣಮಂತ ರಾಮಣ್ಣ ಮೋಡಕೇರ (22) ಹಾಗೂ ಆಂಜನೇಯ ಹಣಮಂತರಾಯ ಗಾಲಿ (30) ಇವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿತರಿಂದ ಒಟ್ಟು 27 ಮೊಟಾರ್ ಸೈಕಲ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಕಿಮ್ಮತ್ತು ಸುಮಾರು ₹ 16 ಲಕ್ಷ ಆಗಬಹುದೆಂದು ಹೇಳಿದ ಗೋಯಲ್, ಅಮೀನಗಡ ಠಾಣೆಯಲ್ಲಿ 30, ಇಳಕಲ್ ಠಾಣೆಯಲ್ಲಿ 5, ಹುನಗುಂದ ಠಾಣೆಯಲ್ಲಿ 27 ಸೇರಿ ಒಟ್ಟು 62 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶ ಪಡಿಸಿಕೊಂಡ ಬೈಕ್ಗಳು ರಾಜ್ಯವಲ್ಲದೇ ಹೊರ ರಾಜ್ಯಕ್ಕೂ ಸೇರಿದ್ದಾಗಿವೆ. ಇದು ವರ್ಷದ ದೊಡ್ಡ ಪ್ರಕರಣ ಎಂದು ಹೇಳಿದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಸಿಪಿಐ. ಎಸ್.ಬಿ. ಆಜೂರ, ಪಿಎಸ್ಐ.ಗಳಾದ ಎಸ್.ಜಿ. ಆಲದಕಟ್ಟಿ ಹಾಗೂ ಎನ್.ಎಸ್. ಸಿಮಾನಿ, ಸಿಬ್ಬಂದಿಗಳಾದ ಎಸ್.ಬಿ. ಅಮಲಿಹಾಳ, ಆಯ್.ಎಸ್. ಮಂಟ್ಯಾಳ, ಕೆ.ವಾಯ್. ವಾಲಿಕಾರ, ಎಂ.ಎಸ್. ನಾರಗಲ್ಲ, ಸಿದ್ದಪ್ಪ ಕೌಲಗಿ, ಬಿ.ಎನ್. ಗೌಡರ, ಎ.ಬಿ. ಯರದಾಳ, ಯಲ್ಲಪ್ಪ ಅಂಬಿಗೇರ, ಗಣೇಶ ಪವಾರ, ಆನಂದ ಗೋಲಪ್ಪನವರ, ಚಂದ್ರು ಜಟ್ಟೆಪ್ಪಗೋಳ, ಬಸವರಾಜ ಜಗಲಿ ಇವರ ಕಾರ್ಯವನ್ನು ಎಸ್ಪಿ ಸಿದ್ದಾರ್ಥ ಶ್ಲಾಘಿಸಿದರು.
ಡಿವೈಎಸ್ಪಿ. ಸಂತೋಷ ಬನ್ನಟ್ಟಿ, ಸಿಪಿಐ. ಎಸ್.ಬಿ. ಆಜೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.