
ಬಾದಾಮಿ: ‘ತಾಲ್ಲೂಕಿನ ಕಾಕನೂರ ಗ್ರಾಮದ ಎಸ್.ಬಿ.ಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ದರೋಡೆಕೋರರನ್ನು ವಶಪಡಿಸಿಕೊಂಡು ಆರೋಪಿತರಿಂದ ₹24.75 ಲಕ್ಷ ಮೌಲ್ಯದ 198 ಗ್ರಾಂ ಚಿನ್ನ ಮತ್ತು ನಗದು ₹1.55 ಲಕ್ಷ ಮೌಲ್ಯದ ಒಟ್ಟು ₹26.30 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದರು.
‘ಸೆ.3ರ 2025 ರಂದು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಧಿಕಾರಿಗಳು ಮತ್ತು ಪೊಲೀಸರು ಚುರುಕು ಪತ್ತೆ ಕಾರ್ಯಾಚರಣೆ ಕೈಗೊಂಡರು’ ಎಂದು ಸಿಪಿಐ ಕಾರ್ಯಾಲಯದಲ್ಲಿ ಸೋಮವಾರ ಅವರು ಪತ್ರಕರ್ತರಿಗೆ ಹೇಳಿದರು.
‘ಆರೋಪಿತರು ಉತ್ತರ ಪ್ರದೇಶದವರೆಂದು ಮಾಹಿತಿ ತಿಳಿದಾಗ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತರ ಪ್ರದೇಶಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ರಾತ್ರಿ ಸಮಯದಲ್ಲಿ ಐದು ಜನ ದರೋಡೆಕೋರರು ಹಿಂದಿನಿಂದ ಬ್ಯಾಂಕಿಗೆ ಬಂದು ಗ್ಯಾಸ್, ಆಕ್ಸಿಜನ್ ಸಿಲಿಂಡರ್ ಮತ್ತು ಗ್ಯಾಸ್ ಕಟರ್ ಬಳಿಸಿ ಕನ್ನಹಾಕಿದ್ದರು’ ಎಂದು ಆರೋಪಿಗಳಿಂದ ತಿಳಿದಿದೆ.
‘ನ. 13ರ 2025 ರಂದು ರಾತ್ರಿ ಗಸ್ತು ತಿರುಗುತ್ತಿದ್ದಾಗ ಸಂದೇಹಾಸ್ಪದವಾಗಿ ಕಂಡ ಮಹ್ಮದ್ ನವಾಬ್ ಜಾಕಿರ್ ಅಲಿಖಾನ್ ಎಂಬಾತನನ್ನು ವಿಚಾರಿಸಿದಾಗ ಆರೋಪಿ ದರೋಡೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ’ ಎಂದರು.
ಉತ್ತರ ಪ್ರದೇಶದ ಮತ್ತೊಬ್ಬ ಆರೋಪಿ ಕಮರುಲಖಾನ್ ಮಾಮು ಈ ಮೊದಲು ಕುಳಗೇರಿ ವೃತ್ತದ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ ಕಳ್ಳತನದಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತರ ಪ್ರದೇಶಕ್ಕೆ ಒಂದು ತಿಂಗಳು ತೆರಳಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಪಿಐ ಕರಿಯಪ್ಪ ಬನ್ನೆ, ಪಿಎಸ್ಐ ಬಿ.ಎ.ರಬಕವಿ, ವಿಜಯಕುಮಾರ ರಾಠೋಡ, ಎಚ್.ಕೆ. ನರಳೆ, ಸಿದ್ದಪ್ಪ ಯಡಹಳ್ಳಿ ಮತ್ತು ಪೊಲೀಸ್ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.