
ಕುಡಚಿ–ಬಾಗಲಕೋಟೆ ರೈಲು ಮಾರ್ಗ ವಿಸ್ತರಿಸಬೇಕು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮನವಿ ಸಲ್ಲಿಸಿದರು
ಬಾಗಲಕೋಟೆ: ವಿವಿಧ ರೈಲುಗಳ ಮಾರ್ಗ ವಿಸ್ತರಣೆ, ಹೊಸ ಮಾರ್ಗಗಳ ನಿರ್ಮಾಣ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ ಮನವಿ ಸಲ್ಲಿಸಿದ್ದಾರೆ.
ಕುಡಚಿ-ಬಾಗಲಕೋಟೆ ರೈಲು ಮಾರ್ಗವನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಬಸವ ಎಕ್ಸ್ಪ್ರೆಸ್ ಅನ್ನು ಲೋಕಾಪುರದವರೆಗೆ ವಿಸ್ತರಿಸಿ, ವ್ಯಾಪಾರ ಅಭಿವೃದ್ಧಿ, ಹತ್ತಿರದ ಪ್ರದೇಶಗಳ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು. ಈ ಪ್ರದೇಶದಲ್ಲಿ ಸಕ್ಕರೆ ಹಾಗೂ ಸಿಮೆಂಟ್ ಕೈಗಾರಿಕೆಗಳಿದ್ದು, ಅವುಗಳ ಸರಕು ಸಾಗಣೆಗೆ ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.
ವಿಜಯಪುರ-ತಿರುಪತಿ ದೈನಂದಿನ ಎಕ್ಸ್ಪ್ರೆಸ್ ರೈಲು ಆರಂಭಿಸಬೇಕು ಆ ಮೂಲಕ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಲಕ್ಷಾಂತರ ಜನರ ಆಧ್ಯಾತ್ಮಿಕ ಕೇಂದ್ರಕ್ಕೆ ಭೇಟಿ ನೀಡಲು ಅನುಕೂಲ ಕಲ್ಪಿಸಬೇಕು ಎಂದು ಕೋರಿದರು.
ಪ್ರಸ್ತಾವಿತ ಲೋಕಾಪುರ-ಧಾರವಾಡ ಮಾರ್ಗಕ್ಕೆ ಅನುಮೋದನೆ ನೀಡಬೇಕು. ಮುಂಬರುವ ರೈಲ್ವೆ ಬಜೆಟ್ನಲ್ಲಿ ಸೇರಿಸಬೇಕು. ಪಂಢರಪುರ -ಬೆಂಗಳೂರು ಗೋಲ್ಗುಂಬಜ್ ಎಕ್ಸ್ಪ್ರೆಸ್ ರೈಲಿನ ವೇಗ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಹುಬ್ಬಳ್ಳಿ-ಹಜರತ್ ನಿಜಾಮುದ್ದೀನ್ ರೈಲಿನ ವೇಗ ಹೆಚ್ಚಿಸಬೇಕು. ವಾರದಲ್ಲಿ ಐದು ದಿನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಈ ಸೇವೆಗಳು ಪ್ರಾದೇಶಿಕ ಅಭಿವೃದ್ಧಿ ವೇಗವನ್ನು ಹೆಚ್ಚಿಸುತ್ತವೆ. ಅಸ್ತಿತ್ವದಲ್ಲಿರುವ ಮಾರ್ಗಗಳ ಸಂಚಾರ ದಟ್ಟಣೆ ಕಡಿಮೆ ಮಾಡುತ್ತವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.