ವಿಜಯಪುರ ಹಾಗೂ ಬಾಗಲಕೋಟ ಹಾಲು ಒಕ್ಕೂಟ ಅಧ್ಯಕ್ಷ ಈರಣ್ಣ ಕರಿಗೌಡರ
ಕೆರೂರ: ‘ವಿಜಯಪುರ- ಬಾಗಲಕೋಟೆ ಜಿಲ್ಲೆಗಳ ಹಾಲು ಒಕ್ಕೂಟವನ್ನು ಪ್ರತ್ಯೇಕಗೊಳಿಸುವ ಕುರಿತು ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದ ಬಳಿಕ ತಿರ್ಮಾನಿಸಲಾಗುವುದು’ ಎಂದು ಒಕ್ಕೂಟದ ನೂತನ ಅಧ್ಯಕ್ಷ ಈರಣ್ಣ ಕರಿಗೌಡರ ಹೇಳಿದರು.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಎಲ್ಲಾ ಸಾಮರ್ಥ್ಯವಿದ್ದರೂ, ಇಚ್ಛಾಶಕ್ತಿ ಕೊರತೆ ಹಾಗೂ ಕೆಲವು ತಾಂತ್ರಿಕ ತೊಂದರೆಗಳ ಕಾರಣದಿಂದ ಪ್ರತ್ಯೇಕತೆ ವಿಷಯ ಇತ್ಯರ್ಥಗೊಂಡಿಲ್ಲ’ ಎಂದರು.
‘ಸುಮಾರು 490ಕ್ಕೂ ಅಧಿಕ ಸಂಘಗಳಿಂದ ನಿತ್ಯ 1.20 ಲಕ್ಷ ಲೀ ಉತ್ಪಾದನೆ, 80 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ನೂತನ ಮಹಿಳಾ ಹಾಲು ಸಂಘ ಸ್ಥಾಪನೆಗೆ ₹6 ಲಕ್ಷ ಸಹಾಯಧನ ನೀಡಲಾಗುತ್ತಿದೆ. ನಿತ್ಯ 50 ಲೀಟರ್ಗೂ ಹೆಚ್ಚು ಹಾಲು ಉತ್ಪಾದಿಸುವ ಆಸಕ್ತ ಮಹಿಳೆಯರು ಇದರ ಪ್ರಯೋಜನೆ ಪಡೆಯಬಹುದು. ಗ್ರಾಮಸಭೆ ಬಳಿಕ ಹೊಸ ಸಂಘ ಸ್ಥಾಪನೆಗೆ ಅನುಮತಿ ನೀಡಲಾಗುವುದು’ ಎಂದು ತಿಳಿಸಿದರು.
ಪನ್ನೀರು ಉತ್ಪಾದನೆಗೆ ಆದ್ಯತೆ: ‘ಉಳಿದ ಹಾಲಿನಿಂದ ಪನ್ನೀರು ಉತ್ಪಾದನೆಯು ಅತ್ಯಧಿಕ ಲಾಭ ನಿಡುತ್ತಿದ್ದು, ನಂದಿನಿ ಉತ್ಪನ್ನಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚಿದೆ. ಈ ಉತ್ಪನ್ನಗಳು ಜನರ ಮನ ಗೆದ್ದಿದ್ದು ಅಷ್ಟೇ ವಿಶ್ವಾಸಗಳಿಸಿದೆ’ ಎಂದರು.
ಅವಳಿ ಜಿಲ್ಲಾ ಹಾಲು ಒಕ್ಕೂಟ ಲಾಭ ಹೆಚ್ಚಿಸಲು ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು, ರೈತರಿಗೆ ನೆರವಾಗಲು ಮತ್ತಷ್ಟು ಶ್ರಮಿಸಲಾಗುವುದು ಎಂದರು.
ಬಾಗಲಕೋಟೆಯಲ್ಲಿ 12 ಕೊಟಿಗೂ ಅಧಿಕ ವೆಚ್ಚದಲ್ಲಿ ನೂತನ ಡೈರಿ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಶೀಘ್ರದಲ್ಲೆ ಉದ್ಘಾಟನೆ ಮಾಡಲಾಗುವುದು-ಈರಣ್ಣ ಕರಿಗೌಡರ, ಅಧ್ಯಕ್ಷ ಜಿಲ್ಲಾ ಹಾಲು ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.