ADVERTISEMENT

ಜಮಖಂಡಿ: ಲಿಂಗನೂರ ಗ್ರಾಮದಲ್ಲಿ ದಶಕಗಳಿಂದ ರಸ್ತೆ, ಮೂಲಸೌಕರ್ಯ ಸಮಸ್ಯೆ

ಚರಂಡಿ, ಬೀದಿ ದೀಪ, ತ್ಯಾಜ್ಯ, ಬಯಲು ಬಹಿರ್ದೆಸೆ ಸಮಸ್ಯೆ

ಆರ್.ಎಸ್.ಹೊನಗೌಡ
Published 28 ಫೆಬ್ರುವರಿ 2024, 4:48 IST
Last Updated 28 ಫೆಬ್ರುವರಿ 2024, 4:48 IST
<div class="paragraphs"><p>ಲಿಂಗನೂರನಿಂದ ಕೊಣ್ಣೂರ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವದು</p></div>

ಲಿಂಗನೂರನಿಂದ ಕೊಣ್ಣೂರ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವದು

   

ಜಮಖಂಡಿ: ತಾಲ್ಲೂಕಿನ ಲಿಂಗನೂರ ಗ್ರಾಮಕ್ಕೆ ಹೋಗಲು ಮೂರು ರಸ್ತೆಗಳಿದ್ದರು ದಶಕಗಳಿಂದ ರಸ್ತೆಗಳು ದುರಸ್ತಿ ಕಾಣದೆ ತಗ್ಗು ಗುಂಡಿಗಳಿಂದ ಸಂಪೂರ್ಣವಾಗಿ ಹದಗೆಟ್ಟಿವೆ.

ಲಿಂಗನೂರ ನಿಂದ ಕೊಣ್ಣೂರ ಗ್ರಾಮದ ಮೂಲಕ ಸಂಚರಿಸುವ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು ಧೂಳಿನಿಂದ ತುಂಬಿದೆ. ಈ ರಸ್ತೆಯಲ್ಲಿ 100ಕ್ಕೂ ಅಧಿಕ ತೋಟದವಸ್ತಿ ಕುಟುಂಬಗಳು ಇವೆ. ಸಾವಿರಾರು ಎಕರೆ ಫಲವತ್ತಾದ ಭೂಮಿ ಇದೆ, ಜಮೀನಿನಲ್ಲಿ ಬೆಳೆದ ಬೆಳೆಗಳು, ಕಬ್ಬು ಕಳಿಸುವದೇ ದೊಡ್ಡ ಸವಾಲಾಗಿದೆ.

ADVERTISEMENT

ಹಂಚನಾಳ ಆರ್ ಸಿ ರಸ್ತೆ, ಜಮಖಂಡಿಯಿಂದ-ಲಿಂಗನೂರ ರಸ್ತೆ, ಹರಿಜನ ಕೆರಿಯಿಂದ ರಬಕವಿ ರಸ್ತೆ ಸೇರಿ ಗ್ರಾಮದ ಪ್ರಮುಖ ರಸ್ತೆಗಳು ಕಿತ್ತು ಹೋಗಿದ್ದು, ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಸಂಚರಿಸುವಾಗ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ.

ದಶಕಗಳ ಹಿಂದೆ ಡಾಂಬರೀಕರಣ ಕಂಡ ರಸ್ತೆಗಳು ಮರಳಿ ದುರಸ್ತಿಯಾಗಿಲ್ಲ, ಗುಂಡಿಗಳ ನಡುವೆ ರಸ್ತೆಯನ್ನು ಹುಡುಕುವ ಪರಿಸ್ಥಿತಿ ಇದೆ, ಯಾವ ಜನಪ್ರತಿನಿಧಿಗಳು ರಸ್ತೆಯನ್ನು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಹಿಡಿಶಾಪಹಾಕುತ್ತಿದ್ದಾರೆ.

ಗ್ರಾಮದಲ್ಲಿ ಚರಂಡಿ, ಬೀದಿ ದೀಪ, ವಿಲೇವಾರಿಯಾಗದ ಕಸ, ಬಯಲು ಬಹಿರ್ದೆಸೆ, ಸೇರಿದಂತೆ ಹಲವಾರು ಮೂಲ ಸೌಲಭ್ಯಗಳ ಕೊರತೆಯಿಂದ ಲಿಂಗನೂರ ಬಳಲುತ್ತಿದೆ. ‘ಗ್ರಾಮಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ’ ಎಂಬುದು ಜನರ ಆರೋಪ.

ಗ್ರಾಮದ ಮಡ್ಡಿಪ್ಲಾಟ್ ನಲ್ಲಿನ ಪ್ರಾಥಮಿಕ ಶಾಲೆಗೆ ಸರಿಯಾದ ಕೋಠಡಿಗಳಿಲ್ಲ, ತುರ್ತಾಗಿ ಎರಡು ಕೋಠಡಿಗಳ ಅವಶ್ಯಕತೆ ಇದೆ ಎಂದು ಗ್ರಾಮಸ್ಥ ಹೂವಪ್ಪ ಊಷಾಕರ ಹೇಳಿದರು.

ಮುಖ್ಯವಾಗಿ ಸಾರ್ವಜನಿಕ ಶೌಚಾಲಯ ಇಲ್ಲದೆ ಮಹಿಳೆಯರು ಪರದಾಡುತ್ತಿದ್ದಾರೆ, ಬಯಲು ಬಹಿರ್ದೆಸೆಯನ್ನು ಅವಲಂಬಿಸಿದ್ದಾರೆ, ಎರಡು ಶೌಚಾಲಯಗಳಿದ್ದರು ನಿರ್ವಹಣೆ ಕೊರತೆಯಿಂದ ಯಾರು ಅತ್ತ ಸುಳಿಯುವುದಿಲ್ಲ.

ವಿದ್ಯಾರ್ಥಿಗಳು ಜಮಖಂಡಿ ಸೇರಿದಂತೆ ವಿವಿಧ ಕಡೆಗೆ ಶಿಕ್ಷಣ ಪಡೆಯಲು ಹೋಗಬೇಕಾದರೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ,ಇನ್ನೊಂದು ಬಸ್ ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.

ಆಶ್ರಯ ಪ್ಲಾಟಗಳಲ್ಲಿ 110ಕ್ಕೂ ಅಧಿಕ ಮನೆಗಳಿವೆ, ಅಲ್ಲಿ ವಾಸಿಸಲು ಗ್ರಾಮ ಪಂಚಾಯತನಿಂದ ಹಂಚಿಕೆ ಮಾಡಿದ್ದಾರೆ, ಅದರಂತೆ ಅಲ್ಲಿನ ನಿವಾಸಿಗಳು ಮನೆಗಳನ್ನು ಕಟ್ಟಿಕೊಂಡಿದ್ದಾರೆ, ಆದರೆ ಅಲ್ಲಿ ಮನೆಕಟ್ಟಿಕೊಂಡ ಜನರಿಗೆ ಪಹಣಿ ನೀಡಿಲ್ಲ, ಇದರಿಂದ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲು ತೊಂದರೆಯಾಗುತ್ತಿದೆ, ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ತೊಂದರೆಯಾಗುತ್ತದೆಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಗ್ರಾಮಸ್ಥ ಕೆಂಚಪ್ಪ ನಾಯಕ ಅಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.