ADVERTISEMENT

ಪೀಠಕ್ಕೂ, ಟ್ರಸ್ಟಿಗೂ ಸಂಬಂಧ ಇಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 0:26 IST
Last Updated 23 ಸೆಪ್ಟೆಂಬರ್ 2025, 0:26 IST
ಕೂಡಲಸಂಗಮ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ನಡೆದ ಖಂಡನಾ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಭಕ್ತರು ಪಾಲ್ಗೊಂಡಿದ್ದರು
ಕೂಡಲಸಂಗಮ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ನಡೆದ ಖಂಡನಾ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಭಕ್ತರು ಪಾಲ್ಗೊಂಡಿದ್ದರು   

ಕೂಡಲಸಂಗಮ: ‘ನನ್ನನ್ನು ಉಚ್ಚಾಟಿಸುವ ಅಧಿಕಾರ ಜಗತ್ತಿನಲ್ಲಿ ಯಾರಿಗೂ ಇಲ್ಲ. ಭಕ್ತರ ಹೃದಯದಲ್ಲಿ ಪೀಠ ಕಟ್ಟಿರುವೆ. ಪೀಠಕ್ಕೂ, ಟ್ರಸ್ಟಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ಖಂಡನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧರ್ಮ ಗುರುಗಳನ್ನು ಉಚ್ಟಾಟಿಸುವ ಅಧಿಕಾರ ಇರುವುದು ದೇವರಿಗೆ ಮತ್ತು ದೇವ ಸ್ವರೂಪಿ ಭಕ್ತರಿಗೆ ಮಾತ್ರ. ಉಚ್ಚಾಟನೆ ಏಕಪಕ್ಷೀಯ, ಕಾನೂನು ಬಾಹಿರವಾಗಿದೆ. ಭಕ್ತರದೇ ಅಂತಿಮ ತೀರ್ಮಾನ’ ಎಂದರು.

‘3-4 ದಿನಗಳಲ್ಲಿ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಭಕ್ತರ ಸಭೆ ಕರೆಯುವೆ. ಅವರು ಹೇಳಿದಂತೆ ಮಾಡುವೆ. ಇಲ್ಲಿಯೇ ಮತ್ತೊಂದು ಮಠ ಕಟ್ಟುವ ವಿಚಾರವಿದೆ’ ಎಂದರು.

ADVERTISEMENT

‘ಕೂಡಲಸಂಗಮದಲ್ಲಿ 13 ಗುಂಟೆ ಹಾಗೂ ದಾವಣಗೆರೆಯಲ್ಲಿ ಭಕ್ತರು ಭೂಮಿ ದಾನ ಮಾಡಿದ್ದಾರೆ. ನಾನು ಯಾವ ಚಟುವಟಿಕೆ ಮಾಡಿಲ್ಲ, ಭಕ್ತರ ಕಾಣಿಕೆ, ಮಠದ ಆಸ್ತಿಯಿಂದ ಯಾವ ಆಸ್ತಿ ಮಾಡಿಲ್ಲ. ಸುಮ್ಮನೆ ತೇಜೋವಧೆ ಮಾಡಬಾರದು. ಕೃತಕ ಬುದ್ಧಿಮತೆಯಿಂದ (ಎಐ) ಏನಾದರೂ ಕೃತ್ಯ ಮಾಡಿದರೂ ಅದನ್ನು ಭಕ್ತರು ನಂಬುವುದಿಲ್ಲ. ಜನರಿಗೆ ಸತ್ಯ ಏನು ಎಂಬುದು ಗೊತ್ತಿದೆ. ಏನೇ ಬಂದರೂ ಗಟ್ಟಿಯಾಗಿ ಎದುರಿಸುವೆ’ ಎಂದರು.

‘ಪಾದಯಾತ್ರೆ ಶುರುವಾದಾಗಿನಿಂದ ಇಂತಹ ಷಡ್ಯಂತ್ರ ಮಾಡುತ್ತಲೇ ಬಂದಿದ್ದಾರೆ. ತಲೆ ಕೆಡಿಸಿಕೊಂಡಿಲ್ಲ. ಭಕ್ತರು ಎಲ್ಲಿ ತೋರಿಸುತ್ತಾರೋ, ಅಲ್ಲಿ ಪೀಠ ಆರಂಭಿಸುವೆ ಎಂದರು.

ಮಧ್ಯಾಹ್ನ ಮೂರಕ್ಕೆ ಕೂಡಲಸಂಗಮದ ಬಸವೇಶ್ವರ ವೃತ್ತಕ್ಕೆ ಬಂದ ಶ್ರೀಗಳನ್ನು ಭಕ್ತರು ಸ್ವಾಗತಿಸಿದರು. ಜಯಘೋಷಗಳೊಂದಿಗೆ ಕಾಲ್ನಡಿಗೆ ಮೂಲಕ ಸಂಗಮೇಶ್ವರ ದೇವಾಲಯಕ್ಕೆ ಹೋಗಿ ದೇವಾಲಯ ಆವರಣದ ನದಿಯ ದಡದ ಆಲದ ಮರದ ಕೆಳಗೆ ಸಭೆ ಮಾಡಿದರು.

ಮುಖಂಡರಾದ ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ಮಲ್ಲನಗೌಡ ಪಾಟೀಲ, ವಿಜಯಪುರದ ರುದ್ರಗೌಡ ಪಾಟೀಲ, ಬಾಗಲಕೋಟೆಯ ಧರಿಯಪ್ಪ ಸಾಂಗ್ಲೀಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.