ADVERTISEMENT

ಕೂಡಲಸಂಗಮ: ಬಸವ ಐಸಿರಿ ಬಾನುಲಿ ಇಂದಿನಿಂದ

52 ವಾರಗಳ ನಿರಂತರ ಕಾರ್ಯಕ್ರಮ: ಕೂಡಲಸಂಗಮ ಅಭಿವೃದ್ಧಿ ಮಂಡಳಿ ನೇತೃತ್ವ

ಶ್ರೀಧರ ಗೌಡರ
Published 13 ಜೂನ್ 2020, 19:45 IST
Last Updated 13 ಜೂನ್ 2020, 19:45 IST
ಕೂಡಲಸಂಗಮದಲ್ಲಿ ಬಸವಣ್ಣನ ಐಕ್ಯಸ್ಥಳ
ಕೂಡಲಸಂಗಮದಲ್ಲಿ ಬಸವಣ್ಣನ ಐಕ್ಯಸ್ಥಳ   

ಕೂಡಲಸಂಗಮ: ಬಸವಾದಿ ಶರಣರ ತತ್ವಾದರ್ಶ, ಸಿದ್ಧಾಂತ, ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಧಾರವಾಡ ಆಕಾಶವಾಣಿ ಕೇಂದ್ರದಿಂದ ಹಮ್ಮಿಕೊಂಡ ಬಸವ ಐಸಿರಿ ಬಾನುಲಿ ಕಾರ್ಯಕ್ರಮ ಜೂನ್ 14ರ ಬೆಳಿಗ್ಗೆ 10ಕ್ಕೆ ಪ್ರಸಾರವಾಗಲಿದೆ.

ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ 10.30ರವರೆಗೆ ಬಸವ ಐಸಿರಿ ಬಾನುಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. 52 ವಾರಗಳು ನಿರಂತರವಾಗಿ ನಡೆಯಲಿದೆ. ಧಾರವಾಡ, ವಿಜಯಪುರ, ಕಲಬುರ್ಗಿ, ಹೊಸಪೇಟೆ, ರಾಯಚೂರ, ಚಿತ್ರದುರ್ಗ ಆಕಾಶವಾಣಿ ಹಾಗೂ ಧಾರವಾಡ, ಕಲಬುರ್ಗಿಯ ವಿವಿಧ ಭಾರತಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರಗೊಳ್ಳಲಿದೆ.

30 ನಿಮಿಷ ಕಾಲ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ವಚನ ಗಾಯನ, ವಚನ ಸಾಹಿತ್ಯ ಚಿಂತನೆ, ಶರಣ, ಶರಣೆಯರ ಪರಿಚಯ, ವಚನಗಳಲ್ಲಿ ವಿಜ್ಞಾನ, ಜನಪದರು ಕಂಡ ಶರಣರ ಕುರಿತು ನಾಡಿನ ಮಠಾಧೀಶರು, ಚಿಂತಕರು, ಸಾಹಿತಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಮಾತನಾಡುವರು. ಕೂಡಲಸಂಗಮ, ಬಸವನ ಬಾಗೇವಾಡಿ, ಚಿಕ್ಕಸಂಗಮ, ಎಂ.ಕೆ.ಹುಬ್ಬಳ್ಳಿ, ತಂಗಡಗಿ ಕ್ಷೇತ್ರಗಳ ಪರಿಚಯ ಈ ವೇಳೆ ಬಿತ್ತರವಾಗಲಿದೆ.

ADVERTISEMENT

ಬಸವಾದಿ ಶರಣರ ತತ್ವ ಸಂದೇಶ, ವಚನ ಸಾಹಿತ್ಯ ಬಿತ್ತರಿಸುವ ಕಾರ್ಯವನ್ನು ಮಂಡಳಿ ಮಾಡಬೇಕು ಎಂಬ ಬಸವ ಭಕ್ತರ ಬೇಡಿಕೆ ಬಹುದಿನಗಳಿಂದ ಇತ್ತು. ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ನಿರ್ದೇಶನದಂತೆ ಬಸವ ಐಸಿರಿ ಕಾರ್ಯಕ್ರಮದ ಯೋಜನೆ ಸಿದ್ಧವಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧ್ಯಕ್ಷತೆಯಲ್ಲಿ 2019ರ ಅಕ್ಟೋಬರ್ ತಿಂಗಳಲ್ಲಿ ಮೂರು ಸರಣಿ ಸಭೆ ನಡೆಸಲಾಗಿತ್ತು.

ಇಳಕಲ್‌ನ ಚಿತ್ತರಗಿ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ, ಕೂಡಲಸಂಗಮ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಎಸ್.ಆರ್.ಚನ್ನವೀರಪ್ಪ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ನಾಡಗೌಡ, ಪತ್ರಕರ್ತ ಶ್ರೀಧರ ಗೌಡರ, ಮಂಡಳಿ ಆಯುಕ್ತೆ ರಾಜಶ್ರೀ ಅಗಸರ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆಯಾಗಿತ್ತು. ಸಮಿತಿ ಈಗ ಕಾರ್ಯಕ್ರಮ ಸಿದ್ಧಪಡಿಸಿದೆ. ಅದು ಜೂನ್ 14ರಿಂದ ಪ್ರಸಾರವಾಗಲಿದೆ. ನೋಡಲ್ ಅಧಿಕಾರಿಯಾಗಿ ಶ್ರೀಧರ ಗೌಡರ ನಿಯೋಜನೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.