
ಬಾಗಲಕೋಟೆ: ಕಲ್ಯಾಣ ಕ್ರಾಂತಿಯಲ್ಲಿ ಎದ್ದ ದಂಗೆಯಲ್ಲಿ ಬಿಜ್ಜಳನ ಸೈನಿಕರೊಂದಿಗೆ ಹೋರಾಡಿ ಅಮೂಲ್ಯ ವಚನಗಳನ್ನು ರಕ್ಷಿಸಿದವರು ಮಡಿವಾಳ ಮಾಚಿದೇವ ಎಂದು ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಡಿವಾಳ ಮಾಚಿದೇವರು ಬಟ್ಟೆ ತೊಳೆಯುವ ಕಾಯಕದ ಜೊತೆಗೆ ಸಮಾಜದಲ್ಲಿಯ ಓರೆ, ಕೋರೆ, ಮೇಲು, ಕೀಳು, ಮೂಢನಂಬಿಕೆಗಳಂತಹ ಅನಿಷ್ಠ ಪದ್ದತಿ ಹೊಡೆದು ಹಾಕಿದ್ದಾರೆ ಎಂದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿ, 12ನೇ ಶತಮಾನದ ಅನುಭವ ಮಂಟಪದಲ್ಲಿ ಶರಣರು ತಮ್ಮ ಅಮೂಲ್ಯವಾದ ವಚನಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಮೂಲಕ ವಿಶ್ವಕ್ಕೆ ತಮ್ಮದೇ ಆದ ಸಂದೇಶ ನೀಡಿದ್ದಾರೆ. ಅಂದಿನ ಅನುಭವ ಮಂಟಪ ಇಂದಿನ ಸಂಸತ್ತು ಆಗಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, ಹಿಂದಿನ ಕಾಲದಲ್ಲಿ ಅಸಮಾನತೆ ಎದ್ದು ಕಾಣುತ್ತಿತ್ತು. ಮೇಲು, ಕೀಳು ಹಾಗೂ ಮಹಿಳೆಯರ ಮೇಲಿನ ಶೋಷಣೆಗೆ ತಿಲಾಂಜಲಿ ಇಟ್ಟ ಶರಣರಲ್ಲಿ ಅಗ್ರಗಣ್ಯರಾದವರು ಮಾಚಿದೇವರು ಎಂದರು.
ಸಾಹಿತಿ ಪಿ.ಎಂ. ಹುಗ್ಗಿ ಉಪನ್ಯಾಸ ನೀಡಿದರು. ತಹಶೀಲ್ದಾರ್ ವಾಸುದೇವಸ್ವಾಮಿ, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎ.ಎಂ.ಮಡಿವಾಳರ, ವಿಜಯಕುಮಾರ ಮಡಿವಾಳರ, ಮುತ್ತು ಮಡಿವಾಳರ, ವೀರಘಂಟಿ, ಶಂಕರ ಮಡಿವಾಳರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.