ADVERTISEMENT

ಬಾದಾಮಿ | ಬೆಂಬಿಡದ ಮಳೆ: ಪ್ರವಾಹಕ್ಕೆ ಅಪಾರ ಬೆಳೆ ಹಾನಿ

ರೈತ ವಲಯದಲ್ಲಿ ಕವಿದ ಚಿಂತೆಯ ಕಾರ್ಮೋಡ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:03 IST
Last Updated 20 ಆಗಸ್ಟ್ 2025, 4:03 IST
ನಿರಂತರ ಮಳೆಯಿಂದ ಬಾದಾಮಿ ಸಮೀಪದ ಮುಚ್ಚಳಗುಡ್ಡ ಗ್ರಾಮದ ರೈತನ ಹೊಲದಲ್ಲಿ ಹೆಸರು ಬೆಳೆ ಕಪ್ಪಾಗಿ ಕಟಾವಿಗೆ ಬಾರದಂತಾಗಿದೆ.
ನಿರಂತರ ಮಳೆಯಿಂದ ಬಾದಾಮಿ ಸಮೀಪದ ಮುಚ್ಚಳಗುಡ್ಡ ಗ್ರಾಮದ ರೈತನ ಹೊಲದಲ್ಲಿ ಹೆಸರು ಬೆಳೆ ಕಪ್ಪಾಗಿ ಕಟಾವಿಗೆ ಬಾರದಂತಾಗಿದೆ.   

ಬಾದಾಮಿ: ಮೂರು ವಾರಗಳಿಂದ ಬೆಂಬಿಡದೇ ಸುರಿಯುತ್ತಿರುವ ಮಳೆಯಿಂದ ಮತ್ತು ಎರಡು ಬಾರಿ ಬಂದ ಬೆಣ್ಣೆ ಹಳ್ಳದ ಪ್ರವಾಹದಿಂದ ಮಲಪ್ರಭಾ ನದಿ ದಂಡೆಯ ಅಂದಾಜು 1,650 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳು ಹಾನಿಯಾಗಿದೆ. 42 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಮುಂಗಾರು ಮಳೆ ಚೆನ್ನಾಗಿ ಆಗಿದ್ದರ ಕಾರಣ ರೈತರು ಬೀಜ–ಗೊಬ್ಬರ ಕೊಂಡುಕೊಂಡು ಮೇ ಮತ್ತು ಜೂನ್ ತಿಂಗಳಲ್ಲಿ ಮುಂಗಾರು ಬಿತ್ತನೆ ಮಾಡಿದ್ದರು. ಬಿತ್ತನೆಯಾದ ತಿಂಗಳ ನಂತರ ಜೂನ್‌ನಲ್ಲಿ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿ ಪ್ರವಾಹಕ್ಕೆ ಚಿಕ್ಕ ಚಿಕ್ಕ ನಾಟಿಕೆಗಳು ಕೊಚ್ಚಿ ಹೋಗಿ 900 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ನಂತರ ರೈತರು ಮತ್ತೆ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಕೈಗೊಂಡರು. ಆಗಸ್ಟ್‌ ಮೊದಲ ವಾರದಲ್ಲಿ ಬೆಣ್ಣೆಹಳ್ಳದ ಪ್ರವಾಹ ಬಂದು ನದಿ ದಂಡೆಯ ಬೆಳೆಗಳು ಜಲಾವೃತವಾಗಿ ಹಾನಿಯಾಗಿವೆ.

ADVERTISEMENT

‘ಪ್ರವಾಹ ಮತ್ತು ಮಳೆಯಾಶ್ರಿತ ಪ್ರದೇಶದಲ್ಲಿ ಅಂದಾಜು 750 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆಗಸ್ಟ್‌ ತಿಂಗಳ 15ರವರೆಗೆ 19 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ 30 ಸೆಂ.ಮೀ. ಮಳೆಯಾಗಿದೆ. ಹೀಗಾಗಿ ಬೆಳೆ ಹಾನಿಯಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ತಿರಕಣ್ಣವರ ಹೇಳಿದರು.

‘ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ 31,275 ಹೆಕ್ಟೇರ್, ಹೆಸರು 5,655 ಹೆಕ್ಟೇರ್ ಮತ್ತು ಸಜ್ಜೆ 5,460 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅತಿಯಾದ ಮಳೆಯಿಂದ ಹೆಸರು, ಮೆಕ್ಕೆಜೋಳ ಮತ್ತು ಸಜ್ಜೆ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ’ ಎಂದು ಅವರು ತಿಳಿಸಿದರು.

‘ಹೆಸರು ಬೆಳೆ ಕಟಾವಿಗೆ ಬಂದಿತ್ತು ಇನ್ನೇನು ಬೆಳೆ ಕಟಾವು ಮಾಡಬೇಕು ಎನ್ನುವಾಗಲೇ ಮಳೆ ಆರಂಭವಾಯಿತು. ಸತತ ಮಳೆಯಿಂದ ಹೆಸರು ಕಾಯಿ ಗಿಡದಲ್ಲಿಯೇ ಮೊಳಕೆ ನಾಟಿ ಕುಮುಸು ವಾಸನೆ ಬಂದಿವೆ. ಯೂರಿಯಾ ಗೊಬ್ಬರದ ಕೊರತೆಯಿಂದ ಮೆಕ್ಕೆಜೋಳದ ಬೆಳೆ ಬಿಳಿಯಾಗಿದೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು’ ಎಂದು ಸುಳ್ಳ ಗ್ರಾಮದ ರೈತ ಸಿದ್ದನಗೌಡ ಗೌಡರ ಕಳವಳ ವ್ಯಕ್ತಪಡಿಸಿದರು.

‘ರೈತರಿಗೆ ಬೀಜ, ಗೊಬ್ಬರದ ಖರ್ಚು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಶೀಘ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕೊಡಬೇಕು. ಸರ್ಕಾರ ತ್ವರಿತವಾಗಿ ಪರಿಹಾರ ಧನ ವಿತರಿಸಬೇಕು’ ಎಂದು ಒತ್ತಾಯಿಸಿದರು.

ನಿರಂತರ ಮಳೆಯಿಂದ ತಾಲ್ಲೂಕಿನಲ್ಲಿ 42 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ. 

ಮಳೆಯಿಂದ ಹೊಲಗಳಲ್ಲಿ ನೀರು ನಿಂತು ಹೊಲಕ್ಕೆ ಹೋಗದಂತಾಗಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿವೆ. ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.

‘ಮಳಿ ಹತ್ತಿ ಮೂರ ವಾರ ಆತ್ರಿ ಹೊಲದಾಗ ನೀರ ನಿಂತಾವು. ಹೆಸರ ಬುಡ್ಡಿ ಬಿಡಸಾಕ ಟಂ ಟಂ ಗಾಡ್ಯಾಗ ರೋಣ, ನರಗುಂದ ಹಳ್ಳಿಗೆ ಹೊಕ್ಕಿದ್ದಿವಿ. ಹೊರಗ ಹೋಗಾಕ ಬಿಡವಲ್ಲದು. ಚೊಲೊ ಪಗಾರ ಸಿಗತಿತ್ತು. ಮಳಿ ಹತ್ತಿ ಬಡವರಿಗೆ ಯಾವುದೂ ಕೆಲಸ ಇಲ್ಲದಂಗ ಆಗೈತಿ. ಮನ್ಯಾಗ ಖಾಲಿ ಕುಂತೀವಿ’ ಎಂದು ಆಡಗಲ್ ಗ್ರಾಮದ ಹನುಮವ್ವ ಪ್ರತಿಕ್ರಿಯಿಸಿದರು.

ಜಲಾಶಯದಿಂದ ಮಲಪ್ರಭಾ ನದಿಗೆ ನೀರು

ಮಂಗಳವಾರ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 12000 ಕ್ಯೂಸೆಕ್ ಮತ್ತು ಬಾಳೇಕುಂದ್ರಿ ಎಡದಂಡೆ ನೀರಾವರಿ ಕಾಲುವೆಗೆ 200 ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ರಾಜು ಬಿಸನಾಳ ತಿಳಿಸಿದ್ದಾರೆ.

ಬೆಣ್ಣೆ ಹಳ್ಳದ ಪ್ರವಾಹದಿಂದ ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಬೆಳೆಗಳು ಜಲಾವೃತವಾಗಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.