
ಹುನಗುಂದ: ಪಟ್ಟಣದ ಮೇಗಲಪೇಟೆಯ ಮಲ್ಲಿಕಾರ್ಜುನ ದೇವಸ್ಥಾನದ ಹಿಂಭಾಗದ ಗುಡ್ಡಕ್ಕೆ ಗುರುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿತ್ತು. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಗುಡ್ಡದ ಕೆಳಭಾಗದಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ರೈತರ ಮೇವು ಮತ್ತು ಹೊಟ್ಟಿನ ಬಣ್ಣಿಮೆ, ಐದಾರು ಮನೆಗಳಿಗಾಗುವ ಅನಾಹುತ ತಪ್ಪಿದೆ.
ಕಿಡಿಗೇಡಿಗಳು ಬೀಡಿ-ಸಿಗರೇಟ್ ಸೇದಿ ಎಸೆದ ತುಣುಕಿನಿಂದಲೂ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಬಿಸಿಲಿಗೆ ಒಣಗಿ ನಿಂತಿದ್ದ ಹುಲ್ಲಿಗೆ ಹೊತ್ತಿಕೊಂಡ ಬೆಂಕಿ ಕ್ಷಣಾರ್ಥದಲ್ಲಿ ಅರ್ಧಕ್ಕೂ ಹೆಚ್ಚು ಗುಡ್ಡ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ನೀರನ್ನು ತೆಗೆದುಕೊಂಡು ಬೆಂಕಿಯನ್ನು ನಂದಿಸಲು ಮುಂದಾದಾಗ ಗುಡ್ಡಕ್ಕೆ ಹೊತ್ತಿಕೊಂಡ ಬೆಂಕಿ ಪ್ರಖರತೆ ಹೆಚ್ಚಾಗಿದ್ದನ್ನು ಮನಗಂಡು ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಅಗ್ನಿಶಾಮಕ ಎಎಫ್ಎಸ್ಒ ಪ್ರಕಾಶ ಚಿತ್ತರಗಿ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗುಡ್ಡದಲ್ಲೀನ ಅನೇಕ ಗಿಡಮರಗಳು ಬೆಂಕಿಗೆ ಸುಟ್ಟು ಕರಕಲಾಗಿವೆ.
ಅಗ್ನಿಶಾಮಕ ಸಿಬ್ಬಂದಿಗಳಾದ ಭೀಮಪ್ಪ ಮನ್ನಿಹಾಳ, ಖಾಜೇಸಾಬ ಗೊಂದುಗುಳಿ, ರವಿಚಂದ್ರ, ಮಲ್ಲೇಶ್ ಡಂಬಳ, ದೊಡೇಶ ಸೇರಿದಂತೆ ಅನೇಕರು ಕಾರ್ಯಾಚರಣೆಯಲ್ಲಿ ಇದ್ದರು.