
ಬಾಗಲಕೋಟೆ: ವಿಶ್ವವಿದ್ಯಾಲಯದ ತಾಂತ್ರಿಕ ನೆರವು, ವೈಜ್ಞಾನಿಕ ಸಲಹೆ ಪಡೆದು ಅಧಿಕ ಮಾವಿನ ಬೆಳೆ ಬೆಳೆಯುತ್ತಿದ್ದಾರೆ ಎಂದು ಪ್ರಗತಿಪರ ರೈತ ಬಿ.ಎಂ. ದೇಸಾಯಿ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ‘ಮಾವಿನ ಬೆಳೆಯಲ್ಲಿ ನೂತನ ತಾಂತ್ರಿಕತೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜ್ಞಾನಿಗಳಿಂದ ಜೈವಿಕ ಪೀಡೆನಾಶಕ ಹಾಗೂ ಜೈವಿಕ ಗೊಬ್ಬರಗಳ ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಮಾಡಿದರೆ ಮಾತ್ರ ಲಾಭ ದೊರೆಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸ್ನಾತಕೋತ್ತರ ಡೀನ್ ತಮ್ಮಯ್ಯ ಮಾತನಾಡಿ, ಮಾವಿಗೆ ರೋಗ ಹಾಗೂ ಕೀಟಗಳ ಬಾಧೆ ಹೆಚ್ಚಾಗಿದೆ. ಸಮಗ್ರ ಹತೋಟಿ ವೈಜ್ಞಾನಿಕ ಸಲಹೆಯಿಂದ ಸಾಧ್ಯ. ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ವಿಶ್ವವಿದ್ಯಾಲಯದಿಂದ ನೂತನವಾಗಿ ಮಾವು ಬೆಳೆಗಾರರ ಸಂಘ ಸ್ಥಾಪಿಸಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಪ್ರಗತಿಪರ ರೈತರ ಕ್ಷೇತ್ರಗಳಲ್ಲಿ ಮಾವಿಗೆ ಬರುವ ರೋಗ, ಪೋಷಕಾಂಶಗಳ ಸಮಗ್ರ ನಿರ್ವಹಣೆ ಹಾಗೂ ರೈತರ ಕ್ಷೇತ್ರದಲ್ಲಿಯೇ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದು ಎಂದು ಹೇಳಿದರು.
ರೈತ ಹಾಗೂ ಸಿಬ್ಬಂದಿ ತರಬೇತಿ ಕೇಂದ್ರದ ಮುಖ್ಯಸ್ಥ ವಸಂತ ಗಾಣಿಗೇರ ಮಾತನಾಡಿ, ಮಾವಿನ ಬೆಳೆಗಾರರ ಸಂಘದ ಮೂಲಕ ರಪ್ತು ಮಾಡುವ ಅವಕಾಶಗಳ ಕುರಿತು ತಿಳಿಸಿದರು.
ಹಣ್ಣು ವಿಭಾಗದ ಸಹಾಯಕ ಪ್ರಾಧ್ಯಾಪಕ ಆನಂದ ನಂಜಪ್ಪನವರ, ಕೀಟಶಾಸ್ತ್ರಜ್ಞ ಚಂದ್ರಶೇಖರ್, ರೋಗಶಾಸ್ತ್ರಜ್ಞ ರಮೇಶ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾ ನಿರ್ದೇಶಕ ವೆಂಕಟೇಶಲು ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.