ತೇರದಾಳ: ಇಲ್ಲಿನ ಕಾಲತಿಪ್ಪಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ ಶನಿವಾರ ಅನಿರೀಕ್ಷಿತವಾಗಿ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲಿ ಕಾರ್ಯನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್ ನೇಮಕಗೊಂಡು ನಾಲ್ಕು ವರ್ಷ ಗತಿಸಿದರೂ ಒಂದು ದಿನವೂ ಸಮವಸ್ತ್ರ ಧರಿಸದೆ ಇರುವುದು, ವಸತಿ ನಿಲಯದ ಮೇಲ್ವಿಚಾರಕ ಶಾಲೆಯಲ್ಲಿ ಇರದಿರುವುದು, ಶಾಲಾ ಆವರಣ ಅಸ್ವಚ್ಛತೆ ಕುರಿತು ಕಿಡಿಕಾರಿದ ಅವರು, ಸಮವಸ್ತ್ರ ಧರಿಸದೆ ಸಾಮಾನ್ಯ ವ್ಯಕ್ತಿಯಂತೆ ಇದ್ದರೆ ಶಾಲೆಯೊಳಗೆ ಯಾರು ಬೇಕಾದರು ಪ್ರವೇಸಿಸುತ್ತಾರೆ. ಹೀಗೆ ಮನಬಂದಂತೆ ನಡೆದುಕೊಂಡರು ಪ್ರಾಚಾರ್ಯಯರು ಕ್ರಮಕ್ಕೆ ಮುಂದಾಗಬೇಕಿತ್ತು ಎಂದರು.
ಪ್ರಾಚಾರ್ಯ ಎಂ.ಆರ್. ನದಾಫ್ ಮಾಹಿತಿ ನೀಡಿದರು. ಬಾಲಕಿಯರ ವಸತಿ ನಿಲಯಕ್ಕೆ ತೆರಳಿ ಅಲ್ಲಿ ವಿದ್ಯಾರ್ಥಿನಿಯರೊಂದಿಗೆ ಸೌಲಭ್ಯಗಳ ಹಾಗೂ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಶಿಕ್ಷಕರೊಂದಿಗೆ ಮಾತನಾಡಿದ ಅಧ್ಯಕ್ಷೆ ಶಿಲ್ಪಾ ರೋಡಕರ, ವಿದ್ಯಾರ್ಥಿಗಳ ಪಾಲಕರು ನಿಮ್ಮ ಮೇಲೆ ನಂಬಿಕೆ ಇಟ್ಟು ವಸತಿ ನಿಲಯದಲ್ಲಿ ಬಿಟ್ಟಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಅಸಭ್ಯವಾಗಿ ವರ್ತಿಸಬಾರದು ಎಂದು ಹೇಳಿದರು.
ಅಡುಗೆ ಕೋಣೆಗೆ ಭೇಟಿ ನೀಡಿ ಪ್ರತಿದಿನದ ಅಡುಗೆಯ ಮಾಹಿತಿ ಪಡೆದು, ಆಹಾರ ತಯಾರಿಕೆಯಲ್ಲಿ ಶುಚಿ, ರುಚಿ ಕಾಪಾಡಬೇಕು. ಬಳಿಕ ಊಟ ಸವಿದು ರುಚಿಯ ಬಗ್ಗೆ ಮನದಟ್ಟು ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.