ರಬಕವಿ ಬನಹಟ್ಟಿ: ನಗರದ ನಿವಾಸಿಧರೆಪ್ಪ ಕಿತ್ತೂರ ತಮ್ಮ ತೋಟದ 1 ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಅದು ಇಸ್ರೇಲ್ ಮಾದರಿ ಬೆಳೆದಿರುವುದು ವಿಶೇಷ. ಈ ಭಾಗದಲ್ಲಿ ರೈತರು ಜಿ 9 ಮತ್ತು ಜವಾರಿ ತಳಿಯ ಬಾಳೆ ಹಣ್ಣು ಬೆಳೆಯುತ್ತಾರೆ. ಆದರೆ ಧರೆಪ್ಪ ಏಲಕ್ಕಿ ಬಾಳೆ ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಧರೆಪ್ಪ ಬೆಳೆದ ಬಾಳೆ ಹಣ್ಣು ಮಾರುಕಟ್ಟೆಗೆ ಬರುವಷ್ಟರಲ್ಲಿ ಕೋವಿಡ್–19 ಲಾಕ್ಡೌನ್ ಆಗಿತ್ತು. ಮಾರುಕಟ್ಟೆ ದೊರೆಯದೆ, ಹಣ್ಣಿಗೆ ಬೆಲೆ ಬಾರದೆ ತೊಂದರೆಯಾಗಿತ್ತು. ಆದರೆ ಧರೆಪ್ಪ ಸ್ವತಃ ತಾವೇ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡು ಹಣ್ಣು ಮಾರಾಟ ಮಾಡಿದರು.
ಬಹಳಷ್ಟು ಜನರು ಅವರ ತೋಟಕ್ಕೆ ಬಂದು ಹಣ್ಣು ಒಯ್ದರೆ ರಬಕವಿ–ಬನಹಟ್ಟಿ, ಜಮಖಂಡಿ ನಗರಗಳ ವ್ಯಾಪಾರಸ್ಥರಿಗೆ ತಾವೇ ಹೋಗಿ ಹಣ್ಣು ಮುಟ್ಟಿಸಿ ಬಂದರು. ಕೇವಲ ಬೆಳೆ ಬೆಳೆದರೆ ಸಾಲದು, ಕೆಲವು ಸಂದರ್ಭದಲ್ಲಿ ನಾವೇ ಮಾರುಕಟ್ಟೆ ಹುಡುಕಿಕೊಳ್ಳಬೇಕಾಗುತ್ತದೆ. ಬೆಂಗಳೂರು, ಬೆಳಗಾವಿ ನಗರಗಳಲ್ಲಿ ಮಾರುಕಟ್ಟೆ ಬಂದ್ ಆಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇವೆ. ಅದರಲ್ಲೂ ರಂಜಾನ್ ಹಬ್ಬವಿರುವುದರಿಂದ ಮಾರಾಟಕ್ಕೆ ಮತ್ತಷ್ಟು ಅನುಕೂಲವಾಯಿತು ಎಂದು ಧರೆಪ್ಪ ಹೇಳುತ್ತಾರೆ.
ಎಕರೆಗೆ 1300 ಬಾಳೆ ಗಿಡ ನಾಟಿ..
ಒಂದು ಎಕರೆಯಲ್ಲಿ ಒಟ್ಟು 1300 ಬಾಳೆ ಗಿಡ ನಾಟಿ ಮಾಡಿದ್ದು, ಪ್ರತಿ ಗಿಡ 10 ಕೆ.ಜಿಯಷ್ಟು ಹಣ್ಣು ನೀಡುತ್ತದೆ. ವರ್ಷಕ್ಕೆ 11 ರಿಂದ 12 ಟನ್ ಬಾಳೆ ಹಣ್ಣು ಬೆಳೆಯುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಗೆ ₹50 ರಿಂದ 60ಕ್ಕೆ ಮಾರಾಟವಾಗುತ್ತಿದೆ. ವರ್ಷಕ್ಕೆ ಎಲ್ಲಾ ಖರ್ಚು ವೆಚ್ಚ ತೆಗೆದು ₹4 ಲಕ್ಷ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಧರೆಪ್ಪ ಕಿತ್ತೂರ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.