
ಬೀಳಗಿ ತಾಲ್ಲೂಕಿನ ಜೆಮ್ ಶುಗರ್ಸ್ ಮುಂದೆ ರೈತರು ಪ್ರತಿಭಟನೆ ಮಾಡಿದರು
ಬೀಳಗಿ: ತಾಲ್ಲೂಕಿನ ಕುಂದರಗಿ ಜೆಮ್ ಸಕ್ಕರೆ ಕಾರ್ಖಾನೆಗೆ ಮುಧೋಳ ಭಾಗದ ರೈತರು ಸೋಮವಾರ ರಾತ್ರಿ ನೂರಾರು ಜನರು ಮುತ್ತಿಗೆ ಹಾಕಿ ಕಾರ್ಖಾನೆ ಪ್ರಾರಂಭಿಸದಂತೆ ಪ್ರತಿಭಟನೆ ನಡೆಸಿದರು.
ಕಾರ್ಖಾನೆ ಆಡಳಿತ ಮಂಡಳಿ ಪರವಾಗಿ ಹಿರಿಯ ಅಧಿಕಾರಿ ಎಸ್. ಮೋಹನರಾಜ್, ಹೇಮಚಂದ್ರ ಅವರು, ಸರ್ಕಾರ ನಿಗದಿ ಪಡಿಸಿದ ಸಕ್ಕರೆ ಪ್ರಮಾಣದ ಇಳುವರಿ ಪ್ರಕಾರ ₹3,260 (ಸರ್ಕಾರದ ₹50 ಸೇರಿ) ದರ ಕೊಡುತ್ತೇವೆ ಎಂದು ಹೇಳಿದರು. ಅದಕ್ಕೊಪ್ಪದ ಪ್ರತಿಭಟನಾಕಾರರು ₹3,500 ದರ ಘೋಷಣೆ ಮಾಡಿಯೇ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಎಂದು ಪಟ್ಟು ಹಿಡಿದರು.
ಕಾರ್ಖಾನೆ ಕೇನ್ ಯಾರ್ಡ್ನಲ್ಲಿ ಕಬ್ಬು ಹೊತ್ತು ತಂದಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳನ್ನು ಹೊರಗೆ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ, ಕಾರ್ಖಾನೆಯ ಅಧಿಕಾರಿಗಳು ಅನಿವಾರ್ಯವಾಗಿ ಟ್ರ್ಯಾಕ್ಟರ್ಗಳನ್ನು ಕಾರ್ಖಾನೆಯಿಂದ ಹೊರಗಡೆ ಕಳಿಸಿದರು.
ಕಾರ್ಖಾನೆ ಅಧಿಕಾರಿಗಳು ಆಡಳಿತ ಮಂಡಳಿಯೊಂದಿಗೆ ಮಾತನಾಡಿ ತಮ್ಮ ಬೇಡಿಕೆಯನ್ನು ತಿಳಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಸಿಪಿಐ ಹನಮಂತ ಸಣಮನಿ ಸಿಬ್ಬಂದಿಯೊಂದಿಗೆ ಬಂದು ಬಂದೋಬಸ್ತ್ ಮಾಡಿದ್ದಾರೆ. ಹೋರಾಟಗಾರರಾದ ಮುತ್ತಪ್ಪ ಕೋಮಾರ, ಬಸವಂತ ಕಾಂಬಳೆ, ಸುಭಾಸ ಶಿರಬೂರ, ದುಂಡಪ್ಪ ಯರಗಟ್ಟಿ, ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.