
ಮಹಾಲಿಂಗಪುರ: ಪಟ್ಟಣದ ಪುರಸಭೆಯಲ್ಲಿ 2020ರ ನ.9ರಂದು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಚುನಾವಣೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಐಡಿ ವಿಶೇಷ ವಿಚಾರಣಾ ವಿಭಾಗದ ಪೊಲೀಸ್ ಉಪಾಧೀಕ್ಷಕಿ ಪ್ರಭಾವತಿ ಪಾಂಡುರಂಗ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಮರು ತನಿಖೆ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ 2021ರಲ್ಲಿ ತನಿಖೆ ನಡೆಸಿತ್ತು. ನಂತರ 2023ರಲ್ಲಿ ಬೆಂಗಳೂರಿನಲ್ಲಿ ಮರುವಿಚಾರಣೆ ನಡೆಸಿತ್ತು. ತದನಂತರದಲ್ಲಿ ಸಿಐಡಿ ತಂಡ ಬಿ ರಿಪೋರ್ಟ್ ಹಾಕಿ ಪ್ರಕರಣ ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಪುರಸಭೆ ಸದಸ್ಯೆ ಚಾಂದನಿ ನಾಯಕ ಕೋರ್ಟ್ ಮೆಟ್ಟಿಲೇರಿದ್ದರು. ಸಾಕ್ಷಾಧಾರಗಳನ್ನು ಪರಿಶೀಲಿಸಿದ ಕೋರ್ಟ್, ಬಿ ರಿಪೋರ್ಟ್ ವಜಾಗೊಳಿಸಿ ಮರು ತನಿಖೆಗೆ ಆದೇಶ ನೀಡಿತ್ತು. ಈ ಆದೇಶದ ಹಿನ್ನೆಲೆ ಸಿಐಡಿ ತಂಡ ಕಳೆದ ಏ.16 ರಿಂದ ಮರು ತನಿಖೆ ಆರಂಭಿಸಿತ್ತು.
ಜಿಎಲ್ಬಿಸಿ ಅತಿಥಿ ಗೃಹದಲ್ಲಿ ಐದು ದಿನಗಳವರೆಗೆ ನಡೆದ ಮರು ತನಿಖೆಯಲ್ಲಿ 50ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ ಸಿಐಡಿ ತಂಡ ಕೆಲವರ ವಿಚಾರಣೆಯನ್ನು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ನಡೆಸಿತ್ತು.
ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿದ ಸಿಐಡಿ ಅಧಿಕಾರಿ ಪ್ರಭಾವತಿ ಪಾಂಡುರಂಗ ನೇತೃತ್ವದ ತಂಡ ಅಗತ್ಯ ಮಾಹಿತಿ ಸಂಗ್ರಹಿಸಿದ ನಂತರ ಸದಸ್ಯೆ ಚಾಂದನಿ ನಾಯಕ ಅವರಿಂದ ಘಟನಾವಳಿಗಳ ಮಾಹಿತಿ ಪಡೆಯಿತು. ಚುನಾವಣೆ ವೇಳೆ ಗಲಾಟೆ ನಡೆದ ಪುರಸಭೆ ಆವರಣ ಹಾಗೂ ಸಭಾಭವನದ ಮಹಜರು ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.