ADVERTISEMENT

ಆಯೋಗ ನಿಗದಿಪಡಿಸಿದಷ್ಟೇ ಖರ್ಚು ಮಾಡಿದ್ದೇನೆಂದು ಪ್ರಮಾಣ ಮಾಡಲಿ: ನಿರಾಣಿ ಸವಾಲು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:07 IST
Last Updated 20 ಆಗಸ್ಟ್ 2025, 4:07 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬಾಗಲಕೋಟೆ: ‘ಯಾರಿಗೂ ದುಡ್ಡು ಕೊಡದೇ ಪ್ರಾಮಾಣಿಕವಾಗಿ ಗೆದ್ದು ಬಂದಿದ್ದೇನೆ ಎಂದು ಹೇಳಿಕೊಳ್ಳುವ ಶಾಸಕ ಜೆ.ಟಿ. ಪಾಟೀಲ, ಚುನಾವಣಾ ಆಯೋಗ ನಿಗದಿ ಪಡಿಸಿದಷ್ಟೇ ಹಣ ಖರ್ಚು ಮಾಡಿ ಗೆದ್ದಿದ್ದೇನೆ ಎಂದು ತಂದೆ-ತಾಯಿ, ಮನೆ ದೇವರ ಮೇಲೆ ಆಣೆ ಮಾಡಿ ಹೇಳಲಿ' ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಮಾಣಿಕವಾಗಿ ಗೆದ್ದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ವಿರುದ್ಧ ಗೆದ್ದು ತೋರಿಸಲಿ. ಚುನಾವಣೆಗೆ ಆಯೋಗ ನಿಗದಿ ಪಡಿಸಿದ ಹಣವನ್ನು ಅವರಿಗೆ ನಾನೇ ಕೊಡುತ್ತೇನೆ. ಅವರು ಎಷ್ಟು ಬೆಟ್ ಕಟ್ಟುತ್ತಾರೋ ಒಂದಕ್ಕೆ ಹತ್ತರಷ್ಟು ಕೊಡುತ್ತೇನೆ’ ಎಂದು ಹೇಳಿದರು.

‘2004ರ ಚುನಾವಣೆಯಲ್ಲಿ 35 ಸಾವಿರ ನಕಲಿ ಮತಗಳಿಂದಾಗಿ ಸೋತಿದ್ದೇನೆ ಎಂದಿದ್ದಾರೆ. ಆಗ ಅವರದ್ದೇ ಸರ್ಕಾರವಿತ್ತು. ಏನು ಮಾಡುತ್ತಿದ್ದರು. ಈಗ ಜ್ಞಾನೋದಯವಾಗಿದೆಯೇ? 2008 ಮತ್ತು 2018ರಲ್ಲಿ ಸೋತಿದ್ದೇಕೆ? ಸುಳ್ಳು ಹೇಳುವುದೇ ಕಾಂಗ್ರೆಸ್‌ ನಾಯಕರ ಚಾಳಿಯಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮುಖಂಡರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದುಪಡಿಸಲಾಗಿತ್ತು. ಅದಕ್ಕೆ ಬೇಕಾದರೆ ದಾಖಲೆ ಕೊಡುವೆ’ ಎಂದರು.

ADVERTISEMENT

‘ಪ್ರಾಮಾಣಿಕ ಎನ್ನುವ ಶಾಸಕರು, ಚುನಾವಣೆಯಲ್ಲಿ ₹15 ಕೋಟಿ ಖರ್ಚು ಮಾಡಿರುವೆ ಎಂದು ಹೇಳಿ ಅಧಿಕಾರಿಗಳ ವರ್ಗಾವಣೆ, ಗುತ್ತಿಗೆದಾರರಿಂದ ಹಣ ಪಡೆಯುತ್ತಿದ್ದಾರೆ. ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ನಿಲ್ಲಿಸಿದ್ದರು. ಕಮಿಷನ್‌ ನೀಡಿದ ಮೇಲೆ ಮತ್ತೆ ಆರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ದೂರಿದರು.

‘ಶಾಸಕನಾಗಿದ್ದ ವಿವಿಧ ಗುಡಿಗಳು, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದೆ. ಅದರಲ್ಲಿ ಅರ್ಧದಷ್ಟು ಅನುದಾನ ಬಿಡುಗಡೆಯಾಗಿತ್ತು. ಹೇಗೂ ಸರ್ಕಾರದಿಂದ ಅನುದಾನ ಬರುತ್ತದೆ ಎಂದು ಗ್ರಾಮಸ್ಥರೇ ಕೆಲವು ಕಡೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಈಗ ಪಾಟೀಲರು ಅನುದಾನವನ್ನು ಬೇರೆ ಕಡೆ ನೀಡುತ್ತಿದ್ದಾರೆ. ಹೊಸ ಅನುದಾನ ತಂದು ಅಭಿವೃದ್ಧಿ ಮಾಡಲಿ’ ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆಗೆ ನಷ್ಟಕ್ಕೂ ಕಾರಣ

ಬಾಗಲಕೋಟೆ: ವಿಜಯಪುರ ಜಿಲ್ಲೆಯಲ್ಲಿ ಮನಾಲಿ ಸಕ್ಕರೆ ಕಾರ್ಖಾನೆ ನಡೆಸಲಾಗದೇ ಶಾಸಕರ ಕುಟುಂಬದವರು ಅದನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಸಾಲಗಾರರಿಗೆ ಹಣ ನೀಡಿಲ್ಲ. ಇದೀಗ ನಂದಿ ಸಕ್ಕರೆ ಕಾರ್ಖಾನೆ ಆಡಳಿತದಲ್ಲಿಯೂ ಮೂಗು ತೂರಿಸುತ್ತಿದ್ದಾರೆ. ಕಾರ್ಖಾನೆ ನಡೆಸಲು ಬೇಕಾದ ₹10 ಕೋಟಿ ಮೊತ್ತಕ್ಕೆ ₹100 ಕೋಟಿ ಷೇರು ಸಂಗ್ರಹ ಮಾಡುತ್ತಿದ್ದಾರೆ. ಉಳಿದ ₹90 ಕೋಟಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.