ಬಾಗಲಕೋಟೆ: ಸ್ವಾಮೀಜಿಗೆ ವಿಷಪ್ರಾಶನ ಮಾಡಿಸಿರಬಹುದು ಎಂದು ತಪ್ಪು ಕಲ್ಪನೆಯಿಂದ ಹೇಳಿದ್ದೇನೆ. ಕ್ಷಮೆ ಇರಲಿ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕೇಳಿದ್ದಾರೆ. ಪತ್ರಿಕಾಗೋಷ್ಠಿ ಕರೆದು ಕ್ಷಮೆ ಕೇಳುವಂತೆ ತಿಳಿಸಿದ್ದೇನೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಗೆ ಸಮಿತಿ ಮಾಡುವಂತೆ ಮೊನ್ನೆಯೇ ಹೇಳಿದ್ದೇನೆ. ಜಾಫರ್ ಹಾಗೂ ಮಾಲತೇಶ ಎಂಬುವವರನ್ನು ಮಠ ಕಾಯಲಿಕ್ಕೆ ಬಿಟ್ಟಿದ್ದೆ. ಅಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು, ಅದನ್ನು ಪರಿಶೀಲಿಸಲಿ ಎಂದರು.
'ಬೇರೆ ಊರ ಗೌಡ, ಇನ್ನೊಂದು ಊರಿಗೆ ಕರ ಕಟ್ಟುವ ಗೂಟ'
ಬಾಗಲಕೋಟೆ ಆಸ್ಪತ್ರೆಯಲ್ಲಿ ಸ್ವಾಮೀಜಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿನ ರಿಪೋರ್ಟ್ ಪರಿಶೀಲಿಸಲಿ. ಯಾವ ಕಾರಣಕ್ಕೆ ಅಡ್ಮಿಟ್ ಆಗಿದ್ದರು ಎಂಬುದು ಗೊತ್ತಾಗುತ್ತದೆ. ಇದು ಬಿಜೆಪಿಯವರ ಕುತಂತ್ರ. ಸಿಸಿ ಪಾಟೀಲ ಗೌರವದಿಂದ ಮಾತನಾಡಲು ಕಲಿಯಲಿ. ಗೌಡ ಇದ್ದರೆ ಅವರ ಊರಿನಲ್ಲಿರುತ್ತಾನೆ. ಬೇರೆ ಊರ ಗೌಡ, ಇನ್ನೊಂದು ಊರಿಗೆ ಕರ ಕಟ್ಟುವ ಗೂಟ ಎಂದು ಟೀಕಿಸಿದರು.
ಸಿಎಂ ಮೆಚ್ಚಿಸಲಿಕ್ಕೆ ಕೀಲಿ ಹಾಕಿಸಲಾಗಿದೆ ಎಂಬ ಟೀಕೆಗೆ, ಮಠಕ್ಕೆ ಕೀಲಿ ಹಾಕಿಸಿಲ್ಲ. ಗೇಟ್ ಕೂಡಿಸಿದ್ದೇವೆ. ಯಾರನ್ನೂ ಮೆಚ್ಚಿಸುವ ಅವಶ್ಯಕತೆ ಇಲ್ಲ. ಹಿಂದೆ ಸಿಸಿ ಪಾಟೀಲ, ಬೊಮ್ಮಾಯಿ ಚೇಲಾ ಆಗಿದ್ದ. 2ಡಿ ಕೊಡಿಸಿದರಲ್ಲಾ ಏನಾಗಿದೆ ಈಗ? ಬಾಯಿ ಬಂದ್ ಮಾಡಿದರೆ ಚೆನ್ನಾಗಿರುತ್ತದೆ. ವೈಯಕ್ತಿಕ ಟಾರ್ಗೆಟ್ ಮಾಡಿದರೆ, ನಿಮ್ಮ ಮನೆಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪರ್ಯಾಯ ಸ್ವಾಮೀಜಿ ಕುರಿತ ಪ್ರಶ್ನೆಗೆ, ಪೀಠದಲ್ಲಿದ್ದು ಧಾರ್ಮಿಕ ಚಟುವಟಿಕೆ, ಸಂಸ್ಕಾರ ಕಲಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ಆದರೆ, ಅವರು ಪೀಠ ತ್ಯಾಗ ಮಾಡ್ತೀನಿ. ಸಂಚಾರ ಮಾಡುತ್ತೇನೆ ಎನ್ನುತ್ತಾರೆ. ಹಾಗಿದ್ದರೆ, ಪೀಠಾಧೀಶರಾಗಿದ್ದು ಏಕೆ ಎಂದು ಪ್ರಶ್ನಿಸಿದರು.
ಟ್ರಸ್ಟ್ ಅಡಿಯಲ್ಲಿ ಪೀಠ ಆಗಿದೆ. ಟ್ರಸ್ಟ್ನಲ್ಲಿ 50ಕ್ಕೂ ಹೆಚ್ಚು ಜನರಿದ್ದು, ಎಲ್ಲರೂ ಸೇರಿ ನಿರ್ಣಯಿಸಿದ್ದೇವೆ. ನನ್ನ ನಿರ್ಣಯವಲ್ಲ. ನಾಳೆ ನನ್ನನ್ನೇ ಅಧ್ಯಕ್ಷ ಸ್ಥಾನದಿಂದ ತೆಗೆಯಬಹುದು. ಸಂಧಾನಕ್ಕಾಗಿ ಯಾರ ಮನೆಗೂ ಹೋಗಲ್ಲ. ಸಂಧಾನಕ್ಕಾಗಿ ನಮ್ಮ ಮನೆಗೆ ಬರುವವರಿಗೆ ಸ್ವಾಗತ. ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರೆ, ಅವರ ಜೊತೆಗೆ ಮಾತನಾಡುವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.