ಬಾಗಲಕೋಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ ವೆಬ್ಸೈಟ್ನಲ್ಲಿ ಇನ್ನೂ ಹಳೆಯ ಕಾರ್ಯಕಾರಿ ಸಮಿತಿ ಸದಸ್ಯರ ಹೆಸರುಗಳೇ ಇವೆ. ಅದರಲ್ಲಿ ಮೃತರಾಗಿರುವ ಇಬ್ರಾಹಿಂ ಸುತಾರ್ ಅವರ ಹೆಸರಿದೆ.
ಕಾಂಗ್ರೆಸ್ ಸರ್ಕಾರ ಮೂರು ತಿಂಗಳ ಹಿಂದೆ 14 ಸದಸ್ಯರ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಆದರೆ, ಅದನ್ನು ಅಪ್ಡೇಟ್ ಮಾಡುವ ಗೋಜಿಗೆ ಪ್ರತಿಷ್ಠಾನದ ಅಧಿಕಾರಿಗಳು ಹೋಗಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ಸೈಟ್ನಲ್ಲಿ ಪ್ರತಿಷ್ಠಾನದ ಪೇಜ್ ನೋಡಿದರೆ, ಕಾರ್ಯಕಾರಿ ಸಮಿತಿಯಲ್ಲಿ ಇಬ್ರಾಹಿಂ ಸುತಾರ್, ವಿಶ್ವನಾಥ ವಂಶಾಕೃತಮಠ, ಡಾ.ಗಿರೀಶ ಮಾಸೂರಕರ ಮುಂತಾದವರ ಹೆಸರು ಕಾಣಸಿಗುತ್ತವೆ. ಕೆ.ಎಲ್. ಉದುಪುಡಿ, ಸಿದ್ದಪ್ಪ ಬಿದರಿ ಸೇರಿದಂತೆ ಹೊಸದಾಗಿ ನೇಮಕವಾದ 14 ಜನರ ಹೆಸರಿಲ್ಲ.
ವೆಬ್ಸೈಟ್ ಹೆಸರಿನಲ್ಲಿಯೇ ಪ್ರತಿಷ್ಠಾನ ಹಾಗೂ ಊರಿನ ಹೆಸರು ತಪ್ಪಿದೆ. ‘ಕವಿ ಚಕ್ರವರ್ತತಿ ರನ್ನ ಪ್ರತಿಷ್ಠಾನ ಮೂಧೋಳ’ ಎಂದಿದ್ದು, ಚಕ್ರವರ್ತಿ ‘ಚಕ್ರವರ್ತತಿ’ ಎಂದಾಗಿದ್ದರೆ, ಮುಧೋಳ ಎನ್ನುವುದು ‘ಮೂಧೋಳ’ ಎಂದಾಗಿದೆ.
ಪ್ರತಿಷ್ಠಾನದ ಮುನ್ನೋಟ ಪ್ರತಿಬಿಂಬಿಸುವುದಕ್ಕೆ ದೃಷ್ಟಿ ಎಂಬ ಹೆಸರು ನೀಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಏನೂ ಕಾಣ ಸಿಗುವುದಿಲ್ಲ. ‘ಸಾಧನೆಗಳು’ ಮೇಲೆ ಕ್ಲಿಕ್ ಮಾಡಿದರೆ ಯಾವುದೇ ಮಾಹಿತಿಯನ್ನೂ ಸೇರ್ಪಡೆ ಮಾಡಿಲ್ಲ. ನಂತರದಲ್ಲಿರುವ ‘ಚಿತ್ರ ಸಂಪುಟ’ದ ಮೇಲೆ ಕ್ಲಿಕ್ ಮಾಡಿದರೆ ಒಂದೇ ಒಂದು ಫೋಟೊ ಹಾಕಿಲ್ಲ. ಸಂಪರ್ಕ ವಿವರದಲ್ಲಿ ಮಾತ್ರ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಲ್ಯಾಂಡ್ ಲೈನ್ ನಂಬರ್ ಹಾಕಲಾಗಿದೆ.
ರನ್ನ ವೈಭವ ನಡೆಯುತ್ತಿದೆ ರನ್ನನ ಬಗ್ಗೆ ತಿಳಿದುಕೊಳ್ಳೋಣ ಎಂದು ಯಾರಾದರೂ ಪ್ರತಿಷ್ಠಾನದ ಪೇಜ್ ಓಪನ್ ಮಾಡಿದರೆ ಏನೂ ಕಾಣ ಸಿಗುವುದಿಲ್ಲ. ಅಪ್ಡೇಟ್ ಮಾಡುವ, ಚಿತ್ರಗಳನ್ನು ಅಪ್ಲೋಡ್ ಮಾಡುವ ಕೆಲಸವನ್ನೂ ಪ್ರತಿಷ್ಠಾನದ ಅಧಿಕಾರಿಗಳು ಮಾಡಿಲ್ಲ. ಇದು ರನ್ನನ ಬಗ್ಗೆ ಅಧಿಕಾರಿಗಳಿಗಿರುವ ನಿರ್ಲಕ್ಷವನ್ನು ತೋರಿಸುತ್ತದೆ.
‘ಪ್ರತಿಷ್ಠಾನ ಕಾಟಾಚಾರಕ್ಕೆ ಎಂಬಂತಾಗಿದೆ. ಪ್ರತಿಷ್ಠಾನದಲ್ಲಿ ಅನುದಾನವಿದ್ದರೂ ಸರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ. ರನ್ನ ಸಾಹಿತ್ಯದ ಪ್ರಚಾರದ ಕೆಲಸವೂ ಆಗುತ್ತಿಲ್ಲ’ ಎಂದು ಜಿಲ್ಲೆಯ ಸಾಹಿತಿಗಳು ದೂರುತ್ತಾರೆ.
ಈ ಕುರಿತು ಪ್ರತಿಕ್ರಿಯೆಗಾಗಿ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.