ADVERTISEMENT

ಬಾಗಲಕೋಟೆ: 802 ಮಂದಿ ಬಿಪಿಎಲ್ ಕಾರ್ಡ್ ಮರಳಿಸಿದರು!

ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ: ಶಿಕ್ಷಕರು, ಪೊಲೀಸರು, ಹೆಸ್ಕಾಂ ಸಿಬ್ಬಂದಿಯೂ ಕಾರ್ಡ್ ಹೊಂದಿದ್ದರು

ವೆಂಕಟೇಶ್ ಜಿ.ಎಚ್
Published 3 ಅಕ್ಟೋಬರ್ 2019, 19:30 IST
Last Updated 3 ಅಕ್ಟೋಬರ್ 2019, 19:30 IST
   

ಬಾಗಲಕೋಟೆ: ಅನರ್ಹರು ಬಿಪಿಎಲ್ ಕಾರ್ಡ್‌ಗಳನ್ನು (ಪಡಿತರ ಚೀಟಿ) ಮರಳಿಸುವಂತೆ ರಾಜ್ಯ ಸರ್ಕಾರ ನೀಡಿದ ಸೂಚನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸೆಪ್ಟೆಂಬರ್ 20ರಿಂದ 30ರವರೆಗೆ ಒಟ್ಟು 10 ದಿನಗಳಲ್ಲಿ ಜಿಲ್ಲೆಯಲ್ಲಿ 802 ಮಂದಿ ಸ್ವಯಂಪ್ರೇರಿತವಾಗಿ ಮರಳಿಸಿದ್ದಾರೆ.

‘ಮಾಧ್ಯಮಗಳ ಮೂಲಕ ಮಾಡಿಕೊಂಡ ಮನವಿಗೆ ಸ್ಪಂದಿಸಿ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಇಲಾಖೆಯ ಕಚೇರಿಗಳಿಗೆ ಬಂದು ಅನರ್ಹರು ಬಿಪಿಎಲ್ ಕಾರ್ಡ್ ಮರಳಿಸಿದ್ದಾರೆ‘ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಹೇಳುತ್ತಾರೆ.

ಅವಧಿ ವಿಸ್ತರಣೆ?: ‘ಸೆಪ್ಟೆಂಬರ್ 30ಕ್ಕೆ ಕಾರ್ಡ್ ಮರಳಿಸಲು ಅಂತಿಮ ದಿನ ಮುಕ್ತಾಯಗೊಂಡಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವ ಕಾರಣಕ್ಕೆ ಕೇಂದ್ರ ಕಚೇರಿಯಿಂದ ಇನ್ನೂ 15 ದಿನ ಕಾಲಾವಕಾಶ ವಿಸ್ತರಿಸುವ ನಿರೀಕ್ಷೆ ಇದೆ. ಈ ವಾರದಲ್ಲಿಯೇ ಆದೇಶ ಹೊರಬೀಳಬಹುದು‘ ಎಂದು ಹೇಳುತ್ತಾರೆ.

ADVERTISEMENT

ಸರ್ಕಾರಿ ನೌಕರರು ಇದ್ದಾರೆ:ಹೀಗೆ ಪಡಿತರ ಚೀಟಿ ಮರಳಿಸಿದವರಲ್ಲಿ ಶಿಕ್ಷಕರು, ಪೊಲೀಸರು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರೂ ಸೇರಿದ್ದಾರೆ. ಕೆಲವರು ಮೊದಲಿನಿಂದಲೂ ಬಿಪಿಎಲ್ ಕಾರ್ಡ್ ಹೊಂದಿದ್ದು, ವರ್ಷದ ಹಿಂದೆ ಸರ್ಕಾರಿ ಸೇವೆಗೆ ಸೇರಿದ್ದಾರೆ. ಆದರೆ ಕಾರ್ಡ್ ಮರಳಿಸದೇ ರೇಷನ್ ಪಡೆಯುತ್ತಿದ್ದರು. ಅಂತಹವರು ಈಗ ಬಂದು ವಾಪಸ್ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಯಾರು ಅನರ್ಹರು:‘ಆದಾಯ ತೆರಿಗೆ ಪಾವತಿಸುತ್ತಿರುವ, ನಗರ, ಪಟ್ಟಣ ಪ್ರದೇಶಗಳಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚಿನ ಅಳತೆಯ ಪಕ್ಕಾ ಮನೆ ಹೊಂದಿರುವವರು. ಸರ್ಕಾರಿ ನೌಕರರು,ಸಹಕಾರ ಸಂಘಗಳ ಕಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿಗಳು, ಬ್ಯಾಂಕ್, ಆಸ್ಪತ್ರೆ ನೌಕರರು, ವಕೀಲರು, ಆಡಿಟರ್ಸ್‌, ದೊಡ್ಡ ಅಂಗಡಿ, ಹೋಟೆಲ್‌ ವರ್ತಕರು, ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು, ಅನುದಾನಿತ ಶಾಲಾ ಕಾಲೇಜು ನೌಕರರು, ಗುತ್ತಿಗೆದಾರರು, ಕಮಿಷನ್ ಏಜೆಂಟ್‌ಗಳು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿಗೆ ನೀಡಿ ವರಮಾನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪನಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರುಬಿಪಿಎಲ್ಕಾರ್ಡ್‌ ಹೊಂದಿದ್ದರೆ ಅದು ಕಾನೂನು ಬಾಹಿರವಾಗುತ್ತದೆ.

ಬಿಪಿಎಲ್ಪಡಿತರ ಚೀಟಿ ಪಡೆಯಲು ಕುಟುಂಬದ ಆದಾಯವನ್ನು ಸರ್ಕಾರ ವರ್ಷಕ್ಕೆ ₹1.20 ಲಕ್ಷಕ್ಕೆ ನಿಗದಿಪಡಿಸಿದೆ. ಈ ಆದಾಯ ಮೀರಿದ ಕುಟುಂಬಗಳುಬಿಪಿಎಲ್ಕಾರ್ಡ್‌ ಹೊಂದುವಂತಿಲ್ಲ.

**
ಬಿಪಿಎಲ್ ಕಾರ್ಡ್ ಸ್ವಯಂಪ್ರೇರಿತವಾಗಿ ಮರಳಿಸಲು ಈಗ ಇನ್ನೊಮ್ಮೆ ಅವಧಿ ವಿಸ್ತರಣೆ ಮಾಡಲಾಗುವುದು. ನಂತರ ಕ್ರಿಮಿನಲ್ ಪ್ರಕರಣ ದಾಖಲಿಸಿ ದಂಡ ವಸೂಲಿ, ಕಾರ್ಡ್ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಲಾಗುವುದು.
-ಶ್ರೀಶೈಲ ಕಂಕಣವಾಡಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.