ADVERTISEMENT

ರಾಂಪುರ | ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:25 IST
Last Updated 4 ಸೆಪ್ಟೆಂಬರ್ 2025, 6:25 IST
ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಿರೂರ ಪಟ್ಟಣದಲ್ಲಿ ಬುಧವಾರ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು.
ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಿರೂರ ಪಟ್ಟಣದಲ್ಲಿ ಬುಧವಾರ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು.   

ರಾಂಪುರ: ಬೆಳಿಗ್ಗೆ ಶಾಲೆ-ಕಾಲೇಜುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸಮೀಪದ ಶಿರೂರ ಪಟ್ಟಣದಲ್ಲಿ ಬುಧವಾರ ವಿದ್ಯಾರ್ಥಿಗಳು ಹಠಾತ್ ರಸ್ತೆ ತಡೆ ನಡೆಸಿದರು.

ಬೆಳಿಗ್ಗೆ 9ರಿಂದ 10ರವರೆಗೆ ಶಿರೂರಿನಲ್ಲಿ ಯಾವುದೇ ಬಸ್‌ಗಳು ನಿಲುಗಡೆಯಾಗದೇ ಇರುವುದರಿಂದ ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಇಳಕಲ್ಲ, ಗುಳೇದಗುಡ್ಡ, ಹುನಗುಂದ ಕಡೆಗಳಿಂದ ಬರುವ ಎಲ್ಲ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ಬರುತ್ತಿವೆ. ಹೀಗಾಗಿ ಶಿರೂರಿನಲ್ಲಿ ನಿಲುಗಡೆಯಾಗದೇ ಹೋಗುತ್ತಿವೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.

ಅನೇಕ ಬಾರಿ ಸಮಸ್ಯೆಯನ್ನು ಸಾರಿಗೆ ಸಂಸ್ಥೆಯವರಿಗೆ ಹೇಳಿದ್ದರೂ ವ್ಯವಸ್ಥೆ ಕಲ್ಪಿಸುವುದಕ್ಕೆ ಗಮನಹರಿಸುತ್ತಿಲ್ಲ ಎಂದು ದೂರಿದ ವಿದ್ಯಾರ್ಥಿಗಳು, ಬೆಳಿಗ್ಗೆ ಬಾಗಲಕೋಟೆಯಿಂದ ಶಿರೂರ ಪಟ್ಟಣಕ್ಕೆ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರು ಸಹ ವಿದ್ಯಾರ್ಥಿಗಳನ್ನು ಬೆಂಬಲಿಸಿ ಶಾಲೆಗೆ ತೆರಳುವ ಮಕ್ಕಳಿಗೆ ಸೌಲಭ್ಯ ಮಾಡಿಕೊಡುವಂತೆ ಒತ್ತಾಯಿಸಿದರು.

ADVERTISEMENT

ಈ ಸಂದರ್ಭದಲ್ಲಿ ಪಟ್ಟಣಕ್ಕೆ ಭೇಟಿ ನೀಡಿದ ಸಂಸದ ಪಿ.ಸಿ. ಗದ್ದಿಗೌಡರ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು. ಆಗಲೂ ವಿದ್ಯಾರ್ಥಿಗಳು ಬಾಗಲಕೋಟೆ ಡಿಪೊ ವ್ಯವಸ್ಥಾಪಕ ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಡಿಪೊ ವ್ಯವಸ್ಥಾಪಕ ಕೃಷ್ಣಾ ಚವ್ಹಾಣ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಗುರುವಾರದಿಂದಲೇ ಬಾಗಲಕೋಟೆ-ಶಿರೂರ ಮಧ್ಯೆ ಬೆಳಿಗ್ಗೆ 3 ಬಾರಿ ಸಿಟಿ ಬಸ್ ಓಡಿಸುವ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿಗಳ ರಸ್ತೆ ತಡೆಯಿಂದಾಗಿ ರಾಯಚೂರ-ಬೆಳಗಾವಿ ಹೆದ್ದಾರಿಯಲ್ಲಿ 1 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ತುರ್ತು ಕೆಲಸಗಳಿಗೆ ಹೋಗಬೇಕಾದ ಪ್ರಯಾಣಿಕರು, ವಾಹನಗಳು ಅನಿವಾರ್ಯವಾಗಿ ಬೇರೆ ಮಾರ್ಗದ ಮೂಲಕ ತೆರಳುವಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.