
ಮುಧೋಳ: ನಗರಕ್ಕೆ ಹೊಂದಿಕೊಂಡಂತಿರುವ ಜುಂಜರಕೊಪ್ಪ ವ್ಯಾಪಿಯಲ್ಲಿ ಸೋಮವಾರ ಕಟಾವಿಗೆ ಬಂದಿದ್ದ 150ಕ್ಕೂ ಹೆಚ್ಚು ಎಕರೆ ಕಬ್ಬಿಗೆ ಬೆಂಕಿ ಹೊತ್ತಿಕೊಂಡು ಹಾಳಾಗಿದೆ.
ವರ್ಷಪೂರ್ತಿ ಶ್ರಮಪಟ್ಟು ಬೆಳೆಸಿದ್ದ ಕಬ್ಬನ್ನು ಇನ್ನೇನು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕಿತ್ತು. ಆದರೆ, ಬೆಂಕಿ ಹೊತ್ತಿಕೊಂಡಿದ್ದರಿಂದ ಕೈಗೆ ಬಂದು ತುತ್ತು ಬಾಯಿಗೆ ಬರದಂತಹ ಸ್ಥಿತಿ ರೈತರದ್ದಾಗಿದೆ.
ಹೊಲದಲ್ಲಿ ಹಾಯ್ದು ಹೋಗಿರುವ ವಿದ್ಯುತ್ ಮಾರ್ಗದ ವೈರ್ಗಳು ಕೆಳಗೆ ಜೋತು ಬಿದ್ದಿವೆ. ಕಬ್ಬು ಎತ್ತರವಾಗಿ ಬೆಳೆದಿರುವುದರಿಂದ ಒಂದಕ್ಕೊಂದು ತಗುಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ವರದಿ ಇದೆ.
ಒಬ್ಬರ ಹೊಲಕ್ಕೆ ಹೊತ್ತಿಕೊಂಡ ಬೆಂಕಿಯು ಕೆಲವೇ ಕ್ಷಣಗಳಲ್ಲಿ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹತ್ತಿಕೊಳ್ಳುತ್ತಾ ಸಾಗಿದೆ. ಕಟಾವಿಗೆ ಬಂದಿರುವುದರಿಂದ ರವದಿಯ ಪ್ರಮಾಣ ಜಾಸ್ತಿ ಇತ್ತು. ಇದರಿಂದಾಗಿ ಬೆಂಕಿ ಹರಡುವಿಕೆ ತೀವ್ರವಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.
‘ಲಕ್ಷಾಂತರ ಖರ್ಚು ಮಾಡಿ, ವರ್ಷಪೂರ್ತಿ ದುಡಿದು ಕಬ್ಬು ಬೆಳೆದಿದ್ದೆವು. ಕಾರ್ಖಾನೆಗೆ ಕಬ್ಬು ಕಳುಹಿಸಬೇಕು ಎನ್ನುತ್ತಿರುವಾಗಲೇ ಬೆಂಕಿಯ ಅವಘಡ ನಡೆದಿದೆ. ಇದರಿಂದ ವರ್ಷದ ದುಡಿಮೆ ಕಣ್ಣು ಮುಂದೆಯೇ ಬೆಂಕಿಗೆ ಆಹುತಿಯಾಗಿದೆ’ ಎಂದು ರೈತರು ಸಂಕಷ್ಟ ತೋಡಿಕೊಂಡರು.
ಆನಂದ (ಅನೀಲ) ಚವಾಣ, ಗದಿಗೆಪ್ಪ ಡಂಗಿ, ಸಂಗಪ್ಪ ಮುಗತಿ, ಪ್ರತಾಪ ಚಂದನಶಿವ, ರಾಜೇಂದ್ರ ಚಂದನಶಿವ, ಶಿವಾಜಿ ಚಂದನಶಿವ, ಪೃಥ್ವಿರಾಜ ಚಂದನಶಿವ, ಬಸವರಾಜ ಗೋಸಾರ, ಸುರೇಶ ಹಿಪ್ಪರಗಿ, ಆನಂದ ಬೋಯಿ, ದಶರಥ ಚವಾಣ, ವಿಜಯ ಚವಾಣ, ರಾಜು ನದಾಫ್ ಮುಂತಾದ 25ಕ್ಕೂ ಹೆಚ್ಚು ರೈತರು ಜಮೀನುಗಳಿಗೆ ಬೆಂಕಿ ತಗುಲಿದೆ. ₹1.5 ಕೋಟಿಯಿಂದ ₹2ಕೋಟಿ ವರೆಗೆ ನಷ್ಟ ಆಗಿರಬಹುದು ಅಂದಾಜಿಸಲಾಗಿದೆ.
ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹಾಗೂ ತಾಲ್ಲೂಕು ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
‘ಹೆಸ್ಕಾಂ ಹಾಗೂ ಕೃಷಿ ಅಧಿಕಾರಿಗಳು ಸರ್ವೆ ಮಾಡಿ ಘಟನೆಗೆ ಕಾರಣ ಹಾಗೂ ಕಬ್ಬು ಎಷ್ಟು ಹಾಳಾಗಿದೆ ಎಂದು ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ. ವರ್ಷದ ಬುತ್ತಿ ಹಾಳಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಪರಿಹಾರ ನೀಡಿದರೆ ಮಾತ್ರ ರೈತ ಬದುಕಲು ಸಾಧ್ಯಅನೀಲ ಚವಾಣ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.