ADVERTISEMENT

ಬಾಗಲಕೋಟೆ : ತಿನಿಸು ಕಟ್ಟೆ ಈಗ ಪಾರ್ಕಿಂಗ್ ಸ್ಪಾಟ್ !

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:40 IST
Last Updated 29 ಮೇ 2023, 13:40 IST
ಮಹಾಲಿಂಗಪುರದ ಗುಂಡದ ಬಾವಿ ಬಳಿ ನಿರ್ಮಿತಗೊಂಡಿರುವ ತಿನಿಸುಕಟ್ಟೆ ವಾಣಿಜ್ಯ ಮಳಿಗೆಯಲ್ಲಿ ವಾಹನಗಳನ್ನು ನಿಲ್ಲಿಸಿರುವುದು.
ಮಹಾಲಿಂಗಪುರದ ಗುಂಡದ ಬಾವಿ ಬಳಿ ನಿರ್ಮಿತಗೊಂಡಿರುವ ತಿನಿಸುಕಟ್ಟೆ ವಾಣಿಜ್ಯ ಮಳಿಗೆಯಲ್ಲಿ ವಾಹನಗಳನ್ನು ನಿಲ್ಲಿಸಿರುವುದು.   

ಮಹಾಲಿಂಗಪುರ: ಪಟ್ಟಣದ ಗುಂಡದ ಬಾವಿ ಬಳಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪುರಸಭೆಯಿಂದ ನಿರ್ಮಿತಗೊಂಡಿರುವ ತಿನಿಸುಕಟ್ಟೆ ವಾಣಿಜ್ಯ ಮಳಿಗೆ ಈಗ ಪಾರ್ಕಿಂಗ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ.

ಪುರಸಭೆಯ 2021-22 ನೇ ಸಾಲಿನ ಉದ್ಯಮ ನಿಧಿ ಹಾಗೂ ಪುರಸಭೆ ನಿಧಿಯಡಿ ₹ 51.05 ಲಕ್ಷ ವೆಚ್ಚದಲ್ಲಿ ತಿನಿಸು ಕಟ್ಟೆ ವಾಣಿಜ್ಯ ಮಳಿಗೆ ನಿರ್ಮಾಣಗೊಂಡಿದೆ. ಕಳೆದ ವರ್ಷ ಮಾ.12 ರಂದು ಇದನ್ನು ಉದ್ಘಾಟಿಸಲಾಗಿದೆ. ಮಳಿಗೆಯಲ್ಲಿನ 9 ಅಂಗಡಿಗಳಲ್ಲಿ ಒಂದೇ ಅಂಗಡಿ ಆರಂಭಗೊಂಡಿದೆ. ಇನ್ನೊಂದು ಅಂಗಡಿಯನ್ನು ಪುರಸಭೆಯು ತಾತ್ಕಾಲಿಕವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರವನ್ನಾಗಿ ತೆರೆದಿದೆ. ಉಳಿದ ಅಂಗಡಿಗಳು ಬೀಗ ಜಡಿದಿವೆ.ಎನ್.ಎ.ಲಮಾಣಿ ಕಂದಾಯ ಅಧಿಕಾರಿ ಪುರಸಭೆ ಮಹಾಲಿಂಗಪುರ

ವಾಣಿಜ್ಯ ಮಳಿಗೆಗೆ ಮುಂಗಡ ತುಂಬಿ ಅಂಗಡಿ ಪ್ರಾರಂಭಿಸದೇ ಇರುವ ವ್ಯಾಪಾರಸ್ಥರ ಮುಂಗಡ ಹಣವನ್ನು ಮುಟ್ಟುಗೋಲು ಹಾಕಲಾಗಿದೆ. ಸದ್ಯದಲ್ಲಿಯೇ ನಾಲ್ಕನೇ ಬಾರಿ ಮರುಹರಾಜು ಕರೆಯಲಾಗುತ್ತಿದ್ದು ಶೇ 25 ರಷ್ಟು ಕಡಿಮೆ ಮಾಡಿ ಹರಾಜು ಪ್ರಕ್ರಿಯೆ ನಡೆಸಲಾಗುವುದು.
ಎನ್.ಎ.ಲಮಾಣಿ, ಕಂದಾಯ ಅಧಿಕಾರಿ, ಪುರಸಭೆ ಮಹಾಲಿಂಗಪುರ

ಮಳಿಗೆಯ 9 ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಎಲ್ಲ ಅಂಗಡಿಗಳನ್ನು ಬೇಡಿದ್ದರು. ಹೆಚ್ಚಿಗೆ ಬೇಡಿಕೆ ಸಲ್ಲಿಸಿದ ವ್ಯಾಪಾರಸ್ಥರಿಗೆ ಅಂಗಡಿಗಳ ಹಂಚಿಕೆಯೂ ಆಗಿತ್ತು. ಅಲ್ಲದೆ ಪ್ರತಿ ಅಂಗಡಿಗೆ ₹ 75 ಸಾವಿರದಂತೆ ಮುಂಗಡ ಹಣವನ್ನೂ ಪಾವತಿಸಿದ್ದರು. ಆದರೆ, ಹರಾಜು ಪ್ರಕ್ರಿಯೆಯಲ್ಲಿ ಇರುವ ಆಸಕ್ತಿ ಕ್ರಮೇಣ ವ್ಯಾಪಾರಸ್ಥರಲ್ಲಿ ಕುಂಠಿತವಾಗಿ ಕೊನೆಗೆ ಒಬ್ಬರೇ ಅಂಗಡಿ ಆರಂಭಗೊಳಿಸಿದ್ದರು.

ADVERTISEMENT

ನಂತರ ಎರಡು ಬಾರಿ ಮರುಹರಾಜು ನಡೆಸಿದರೂ ಹರಾಜು ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸಲಿಲ್ಲ. ಇದರಿಂದ ದೊಡ್ಡ ಪ್ರಮಾಣದ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದ ಪುರಸಭೆಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಸದ್ಯ ತಿನಿಸು ಕಟ್ಟೆ ಮಳಿಗೆ ವಾಹನಗಳ ಪಾರ್ಕಿಂಗ್ ಸ್ಥಳವಾಗಿದ್ದು, ಬಿಸಿಲು ಬೇಗೆಯಿಂದ ವಾಹನ ರಕ್ಷಿಸುವ ಸವಾರರಿಗೆ ಅನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.