
ಜಮಖಂಡಿ: ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಆವರಣದ ತುಂಬ ಎಲ್ಲಿ ನೋಡಿದರು ಕಸದ ರಾಶಿ, ಅಲ್ಲಲ್ಲಿ ಹೆಗ್ಗಣಗಳು ಕೆದರಿರುವ ಮಣ್ಣಿನ ಕಿಂಡಿಗಳು, ಒಡೆದಿರುವ ಕಿಟಕಿ, ಬಾಗಿಲುಗಳು, ದೂಳು ತಿನ್ನುತ್ತಿರುವ ಹಳೆಯ ದಾಖಲೆಗಳು ಇದನ್ನು ನೋಡಿದರೆ ಭೂತ ಬಂಗಲೆಯಂತಾಗಿದೆ ಇದು ಹಳೆಯ ತಹಶೀಲ್ದಾರ ಕಾರ್ಯಾಲಯ ಸುಸ್ಥಿತಿ.
ನಗರದ ಹೃದಯ ಭಾಗದಲ್ಲಿ ರಾಜರ ಕಾಲದಲ್ಲಿ ನಿರ್ಮಾಣವಾದ ಕಟ್ಟಡಗಳಿದ್ದು ಇಲ್ಲಿ ಮೊದಲು ತಹಶೀಲ್ದಾರ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿತ್ತು, ಇತ್ತೀಚೆಗೆ ಹೊಸ ಆಡಳಿತ ಸೌಧ ನಿರ್ಮಾಣವಾದ ನಂತರ ತಹಶೀಲ್ದಾರ ಕಾರ್ಯಾಲಯ ಹೊಸ ಆಡಳಿತ ಸೌಧಕ್ಕೆ ಶಿಪ್ಟ್ ಆಗಿದೆ. ಆ ನಂತರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ಇಲಾಖೆಗಳು ಇಲ್ಲಿಗೆ ಬಂದಿವೆ.
ಮೂಲಭೂತ ಸೌಕರ್ಯಗಳು ಇಲ್ಲದ ಈ ಕಟ್ಟಡದ ಅರ್ಧ ಭಾಗದಲ್ಲಿ ಭೂಮಾಪನ ಇಲಾಖೆ, ಆರೋಗ್ಯ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ನಗರಯೋಜನ ಪ್ರಾಧಿಕಾರ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.
ಸಾರ್ವಜನಿಕರ ಶೌಚಾಲಯ ಗಬ್ಬೆದ್ದು ನಾರುತ್ತಿದೆ, ಹಲವು ವರ್ಷಗಳಿಂದ ಅದನ್ನು ಸ್ವಚ್ಛ ಮಾಡಲು ಅಧಿಕಾರಿಗಳು ಮುಂದಾಗಿಲ್ಲ, ಮಹಿಳಾ ಶೌಚಾಲಯದಲ್ಲಿ ಹೋಗದಂತಹ ಪರಿಸ್ಥಿತಿ ಇದೆ.
ಕೆಲ ಕೊಠಡಿಗಳಲ್ಲಿ ಹಳೆಯ ದಾಖಲೆಗಳು ದೂಳು ತಿನ್ನುತ್ತಿವೆ, ಹಲವು ಕಡೆಗಳಲ್ಲಿ ಹೆಗ್ಗಣಗಳು ಹಳೆಯ ದಾಖಲೆಗಳನ್ನು ನಾಶ ಮಾಡಿವೆ, ಬಳಕೆ ಇಲ್ಲದ ಕಾರಣ ಹೆಗ್ಗಣಗಳು ಮಣ್ಣು ಕೆದರಿ ಹಾಕುತ್ತಿದ್ದು ಕೊಠಡಿಗಳು ಹಾಳಾಗುತ್ತಿವೆ, ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ.
ಇಲ್ಲಿ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಆದರೆ ನಿರ್ವಹಿಸುತ್ತಿರುವ ಇಲಾಖೆಗಳು ಮಾತ್ರ ಒಡೆದಿರುವ ಕಿಟಕಿ ಬಾಗಿಲುಗಳನ್ನು ದುರಸ್ತಿ ಮಾಡಿಕೊಂಡಿಲ್ಲ, ಎಲ್ಲಿ ನೋಡಿದರೂ ಎಲೆ, ಅಡಿಕೆ, ಮಾವಾ, ಗುಟಕಾ ತಿಂದು ಉಗುಳಿರುವ ಕಲೆಗಳು ಎದ್ದ ಕಾಣುತ್ತಿವೆ, ಆವರಣ ದೂಳಿನಿಂದ ತುಂಬಿದ್ದರೂ ಯಾರು ತಲೆಕೆಡಿಸಿಕೊಂಡಿಲ್ಲ, ಹೀಗೇ ಬಿಟ್ಟರೆ ಸರ್ಕಾರಿ ಕಟ್ಟಡ ಹಾಳಾಗುತ್ತದೆ.
ಕಚೇರಿಯ ಮುಂದೆ ಅಡ್ಡದಿಡ್ಡಿಯಾಗಿ ಬೈಕ್, ಕಾರುಗಳನ್ನು ನಿಲ್ಲಿಸಿರುತ್ತಾರೆ, ಈ ಕಚೇರಿ ದಾಟಿ ಮುಂದೆ ಕೋರ್ಟ್ ಆವರಣಕ್ಕೆ ಹೋಗಲು ಪರದಾಡುವ ಸ್ಥಿತಿ ಇದೆ, ಕೂಡಲೇ ಅಧಿಕಾರಿಗಳು ಒಬ್ಬ ಸಿಬ್ಬಂದಿಯನ್ನು(ಗಾರ್ಡ್) ನೇಮಕ ಮಾಡಿಕೊಂಡು ನಿರ್ವಹಣೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
---
ಹಳೆ ತಹಶೀಲ್ದಾರ ಕಾರ್ಯಾಲಯದಲ್ಲಿ 8 ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ, ಮೊದಲು ಪ್ರತಿ ತಿಂಗಳು ತಹಶೀಲ್ದಾರ ನೇತೃತ್ವದಲ್ಲಿ ಚರ್ಚೆ ಮಾಡಲಾಗುತ್ತಿತ್ತು, ಒಬ್ಬ ಗಾರ್ಡ್ ನೇಮಕ ಮಾಡಿಕೊಂಡಿದ್ದರು. ಇತ್ತೀಚೆಗೆ ಏನಾಗಿದೆ ಗೊತ್ತಿಲ್ಲ, ಶುಚಿಯಾಗಿ ಇಟ್ಟುಕೊಳ್ಳಲು ಸೂಚಿಸುತ್ತೇನೆ.
-ಶ್ವೇತಾ ಬೀಡಿಕರ, ಎ.ಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.