ಕೆ.ಎನ್. ರಾಜಣ್ಣ
ಬಾದಾಮಿ: ‘ಯಾವುದೇ ಆರೋಪವಿಲ್ಲದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಏಕಾಏಕಿ ಸಚಿವ ಸಂಪುಟದಿಂದ ಏಕಪಕ್ಷೀಯವಾಗಿ ವಜಾ ಮಾಡಿದ್ದನ್ನು ವಾಲ್ಮೀಕಿ ಸಮುದಾಯ ಖಂಡಿಸುತ್ತದೆ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಲಕ್ಷ್ಮಣ ಮರಡಿತೋಟ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕಾದರೆ ಎಸ್ಸಿ, ಎಸ್ಟಿ ಶೋಷಿತ ಸಮುದಾಯ ಮತ್ತು ಅಲ್ಪಸಂಖ್ಯಾತರು ಬೆನ್ನೆಲುಬಾಗಿ ಇಡಿಯಾಗಿ ಮತವನ್ನು ಚಲಾಯಿಸಿದ ಕಾರಣ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಕೇಂದ್ರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜಾತಿಗಣತಿ ರಾಷ್ಟ್ರವ್ಯಾಪಿ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಜಾತಿ ಗಣತಿ ಜಾರಿ ಮಾಡುತ್ತೇವೆ ಎಂದು ಹೇಳಿದಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಮನೂರ ಶಿವಶಂಕ್ರಪ್ಪ ಮತ್ತು ಆರ್.ವಿ. ದೇಶಪಾಂಡೆ ವಿರೋಧಿಸಿದರು. ರಾಹುಲ್ ಗಾಂಧಿ ಹೇಳಿದ ಮಾತನ್ನು ತಿರಸ್ಕರಿಸಿದ್ದರಿಂದ ಇವರ ಮೇಲೆ ಯಾಕೆ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳಲಿಲ್ಲ ’ ಎಂದು ಪ್ರಶ್ನಿಸಿದರು.
‘ ಐದು ದಶಕಗಳಿಂದ ಕ್ಷೇತ್ರದಲ್ಲಿ ಜನರ ಪ್ರೀತಿ ವಿಶ್ವಾಸವನ್ನು ಹೊಂದಿದ ನಿಷ್ಠಾವಂತ ಮತ್ತು ನೇರ ನುಡಿಯ ರಾಜಕಾರಣಿ ರಾಜಣ್ಣ ಅವರನ್ನು ವಜಾ ಮಾಡಿದ್ದು ವಾಲ್ಮೀಕಿ ಸಮುದಾಯಕ್ಕೆ ನೋವನ್ನು ತಂದಿದೆ. ಶೀಘ್ರವಾಗಿ ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ರಾಜ್ಯದಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ಬಿ.ಬಿ. ಜಲಗೇರಿ ಹೇಳಿದರು.
ಗೋವಿಂದ ತಳವಾರ, ಯಲ್ಲಪ್ಪ ಕಲಾದಗಿ, ಕನಕಪ್ಪ ಪರಸನ್ನವರ, ಹುಚ್ಚಪ್ಪ ಹದ್ದೆನ್ನವರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.