ADVERTISEMENT

ಮುಧೋಳ | ಅನಾವರಣಗೊಳ್ಳದ ಜಡಗಣ್ಣ–ಬಾಲಣ್ಣ ಮೂರ್ತಿ: ಜನರ ಅಸಮಾಧಾನ

ಉದಯ ಕುಲಕರ್ಣಿ
Published 6 ಜುಲೈ 2025, 3:07 IST
Last Updated 6 ಜುಲೈ 2025, 3:07 IST
ಮುಧೋಳದ ಹೃದಯ ಭಾಗದಲ್ಲಿ ನಿರ್ಮಾಣ ಮಾಡಿರುವ ಅನಾವರಣಕ್ಕೆ ಕಾಯುತ್ತಿರುವ ಸ್ವಾತಂತ್ರ್ಯ ಸೇನಾನಿಗಳಾದ ಹಲಗಲಿಯ ಜಡಗಣ್ಣ ಬಾಲಣ್ಣ ಮೂರ್ತಿಗಳು
ಮುಧೋಳದ ಹೃದಯ ಭಾಗದಲ್ಲಿ ನಿರ್ಮಾಣ ಮಾಡಿರುವ ಅನಾವರಣಕ್ಕೆ ಕಾಯುತ್ತಿರುವ ಸ್ವಾತಂತ್ರ್ಯ ಸೇನಾನಿಗಳಾದ ಹಲಗಲಿಯ ಜಡಗಣ್ಣ ಬಾಲಣ್ಣ ಮೂರ್ತಿಗಳು   

ಮುಧೋಳ: ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯ ಸಾರಿ ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಕಿಚ್ಚು ಹಚ್ಚಿದ ವಾಲ್ಮೀಕಿ–ನಾಯಕ ಸಮಾಜದ ಜಡಗಣ್ಣ, ಬಾಲಣ್ಣ ಸೇರಿದಂತೆ ಅನೇಕರ ಹೋರಾಟ ಅವಿಸ್ಮರಣೀಯ. ಅವರ ಸೇವೆ ಸ್ಮರಣೆಗೆ ನಗರದ ಹೃದಯ ಭಾಗದ ವಿಜಯಪುರ–ಬೆಳಗಾವಿ ರಾಜ್ಯ ಹೆದ್ದಾರಿ ಮೇಲೆ ಪ್ರತಿಷ್ಠಾಪನೆಗೊಂಡು  ಹತ್ತು ತಿಂಗಳಾದರೂ ಇನ್ನೂ ಉದ್ಘಾಟನೆ ಕಾಣದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ನಗರದ ಜಡಗಣ್ಣ-ಬಾಲಣ್ಣ ವೃತ್ತದಲ್ಲಿ ಕಳೆದ ವರ್ಷ ಆಗಸ್ಟ್ ನಲ್ಲಿ 9 ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಪ್ರತಿಷ್ಠಾಪನೆ ದಿನದಂದು ಪ್ರತಿಮೆಗಳಿಗೆ ಪೂಜೆ‌ ಸಲ್ಲಿಸಿ‌ ಹೊದಿಕೆ ಹಾಕಿದ ಅಧಿಕಾರಿಗಳು ಇದುವರೆಗೂ ಅದನ್ನು ತೆರೆಯುವ ಪ್ರಯತ್ನಕ್ಕೆ‌ ಮುಂದಾಗಿಲ್ಲ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಸರ್ಕಾರದಲ್ಲಿ ಪ್ರಭಾವಿ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರ್.ಬಿ.ತಿಮ್ಮಾಪುರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಆನಾವರಣ ಮಾಡಿಸಬೇಕು ಎಂಬ ಸಂಕಲ್ಪದಿಂದ ವಿಳಂಬವಾಗುತ್ತಿದೆ ಎನ್ನಲಾಗಿದೆ.

ADVERTISEMENT

ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರತಿನಿತ್ಯ ಪ್ರತಿಮೆಗಳಿರುವ ವೃತ್ತದ ಎದುರಿನಲ್ಲಿಯೇ ಓಡಾಡಿದರೂ ಪ್ರತಿಮೆ ಅನಾವರಣಕ್ಕೆ ಮಾತ್ರ ಮುಂದಾಗುತ್ತಿಲ್ಲ. ಹಲಗಲಿ ಬೇಡರ ದಂಗೆಯಿಂದ ಇತಿಹಾಸ ಪುಟದಲ್ಲಿ ತಾಲ್ಲೂಕಿನ ಹೆಸರು ಅಚ್ಚಳಿಯದೆ ಉಳಿಯುವಂತೆ ಮಾಡಿರುವ ಹೋರಾಟಗಾರರ ಪ್ರತಿಮೆ ಅನಾವರಣಕ್ಕೆ ಯಾಕಿಷ್ಟು ವಿಳಂಬ ಮಾಡುತ್ತಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ರಾಜಕೀಯ ಪ್ರತಿಷ್ಠೆ ಬದಿಗಿರಿಸಿ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿ ಶೀಘ್ರವೇ ಪ್ರತಿಮೆ ಅನಾವರಣಗೊಳಿಸಿ ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸೇರಿದಂತೆ ಅನೇಕ ಮುಖಂಡರೊಂದಿಗೆ ಮೂರ್ತಿ ಅನಾವರಣಗೊಳಿಸಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳನ್ನು ಆಮಂತ್ರಿಸಿ ಬೇಗ ಉದ್ಘಾಟನೆ ಮಾಡಬೇಕು
ಭೀಮಸಿ ತಳವಾರ ಅಧ್ಯಕ್ಷ ತಾಲ್ಲೂಕು ವಾಲ್ಮೀಕಿ ಸಮಾಜ
ಆಕರ್ಷಕ ಪ್ರತಿಮೆಗಳು:
ಬ್ರಿಟಿಷರಿಗೆ ಸೋಲುನಿಸಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದ ಹಲಗಲಿ ಬೇಡರ ನಾಯಕರೆನಿಸಿಕೊಂಡಿದ್ದ ಜಡಗಣ್ಣ-ಬಾಲಣ್ಣ ಮೂರ್ತಿ ಅಜಾನುಬಾಹುವಿನಂತೆ ನಿರ್ಮಾಣವಾಗಿದೆ. ಅಂದಾಜು ₹ 18 ಲಕ್ಷ ವೆಚ್ಚದ 9 ಅಡಿ ಎತ್ತರದ ಬೆಳಗಾವಿ ಮೂಲದ ಕಲಾವಿದರೊಬ್ಬರು ಕಂಚಿನ ಮೂರ್ತಿ ನಿರ್ಮಾಣ ಮಾಡಿದ್ದಾರೆ.  ದೊರೆಯದ ಮಾಹಿತಿ: ಜಡಗಣ್ಣ-ಬಾಲಣ್ಣ ಪ್ರತಿಮೆಗಳಿರುವ ವೃತ್ತ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಬೇರೆ ಬೇರೆ ಪ್ರದೇಶದಿಂದ ವಾಹನದಲ್ಲಿ ಪ್ರಯಾಣಿಸುವ ಜನರು ಅವು ಯಾರ ಪ್ರತಿಮೆಗಳು ಎನ್ನುವ ಬಗ್ಗೆ ಸ್ಥಳೀಯರಲ್ಲಿ ಪ್ರಶ್ನಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.