ADVERTISEMENT

ವಿಧಾನ ಪರಿಷತ್‌ ಚುನಾವಣೆ: ‘ಕೈ’ ಚಳಕದಿಂದ ಟಿಕೆಟ್ ತಪ್ಪಿತು..

ಪಕ್ಷದ ನಿರ್ಧಾರ ಗೌರವಿಸುವೆ, ಸುನೀಲಗೌಡಗೆ ಬೆಂಬಲ ನೀಡುವೆ: ಎಸ್.ಆರ್. ಪಾಟೀಲ

ವೆಂಕಟೇಶ ಜಿ.ಎಚ್.
Published 24 ನವೆಂಬರ್ 2021, 4:27 IST
Last Updated 24 ನವೆಂಬರ್ 2021, 4:27 IST
ಎಸ್.ಆರ್.ಪಾಟೀಲ
ಎಸ್.ಆರ್.ಪಾಟೀಲ   

ಬಾಗಲಕೋಟೆ: ‘ಸುನೀಲಗೌಡ ಪಾಟೀಲ ಪಕ್ಷದ ಅಧಿಕೃತ ಅಭ್ಯರ್ಥಿ. ಅವರಿಗೆ ನಾನೇಕೆ ವಿರೋಧ ಮಾಡಲಿ? ನಾನು ಪಕ್ಷಕ್ಕೆ ಬದ್ಧತೆ ಇರುವ ಮನುಷ್ಯ. ಪಕ್ಷ ನನಗೆ ತಾಯಿ ಸಮಾನ. ಯಾರೋ ಏನೋ ಕೈಚಳಕ ಮಾಡಿರಬಹುದು ಎಂದು ಪಕ್ಷಕ್ಕೆ ನಾನೇಕೆ ದ್ರೋಹ ಮಾಡಲಿ’ -ಹೀಗೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮರುಪ್ರಶ್ನಿಸಿದರು.

ವಿಧಾನಪರಿಷತ್‌ಗೆ ವಿಜಯಪುರ–ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಸುನಿಲ್‌ಗೌಡ ಅವರಿಗೆ ಬೆಂಬಲ ಕೊಡುವಿರಾ, ಇಲ್ಲವೇ ತಟಸ್ಥವಾಗಿರುವಿರಾ ಎಂಬ ‘ಪ್ರಜಾವಾಣಿ’ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

45 ವರ್ಷಗಳಿಂದ ಕಾಂಗ್ರೆಸ್‌ನಲ್ಲಿರುವೆ. ಪಕ್ಷ ನನಗೆ ಬಹಳಷ್ಟು ಸ್ಥಾನಮಾನ ಕೊಟ್ಟಿದೆ. ಈ ನಿರ್ಧಾರ ನನಗೂ ಅಚ್ಚರಿಯಾಗಿದೆ.ಆದರೂ ಪಕ್ಷದ ನಿರ್ಣಯ ಗೌರವಿಸುವೆ. ಶಿಸ್ತಿನ ಸಿಪಾಯಿ ಆಗಿ ಒಪ್ಪಿಕೊಳ್ಳುವೆ ಎಂದರು.

ADVERTISEMENT

‘ರಾಜ್ಯದಲ್ಲಿ ಸದ್ಯ ಐದು ಜಿಲ್ಲೆಗಳು ದ್ವಿಸದಸ್ಯತ್ವ ಹೊಂದಿವೆ.ನಾಲ್ಕು ಜಿಲ್ಲೆಗೆ ಒಬ್ಬೊಬ್ಬರನ್ನು ಹಾಕಿ ಐದನೇ ಜಿಲ್ಲೆಗೆ (ವಿಜಯಪುರ–ಬಾಗಲಕೋಟೆ) ಇಬ್ಬರನ್ನು ಹಾಕುತ್ತಾರೆ ಎಂದರೆ ನಮಗೆ ಗೌರವ ಇಲ್ಲವೇ? 45 ವರ್ಷ ಜೇಬಿನಿಂದ ಹಣ ಖರ್ಚು ಮಾಡಿ ರಾಜಕೀಯ ಮಾಡಿದ್ದೇನೆ ಎಂದು ತಿಳಿಸಿದರು.

ಮುಂದೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನು ವಿಚಾರ ಮಾಡಿಲ್ಲ. ಹೈಕಮಾಂಡ್ ಕೂಡ ಆ ಬಗ್ಗೆ ಯಾವ ಭರವಸೆ ಕೊಟ್ಟಿಲ್ಲ. ನನಗೆ ಆಸಕ್ತಿಯೂ ಇಲ್ಲ. ನನಗೆ ಟಿಕೆಟ್ ಕೊಟ್ಟಿಲ್ಲವಲ್ಲ ಅದರ ಬದಲಿಗೆ ಏನಾದರೂ ಕೊಡಿ ಎಂದು ಕೇಳುವ ಜಾಯಮಾನದವನು ನಾನಲ್ಲ. ಕುರ್ಚಿಗಾಗಿ ಎಂದಿಗೂ ಲಾಬಿ ಮಾಡಿಲ್ಲ ಎಂದರು.

’ನನಗೆ ಟಿಕೆಟ್ ಕೈ ತಪ್ಪುವುದರಲ್ಲಿರಾಜಕೀಯ ವಿರೋಧಿಗಳ ಪಾತ್ರ ಆ ಭಗವಂತನಿಗೆ ಗೊತ್ತು. ಪ್ರತಿ ಪಕ್ಷದವರೂ ನನ್ನ ಬಗ್ಗೆ ಬೆರಳು ಮಾಡಿ ತೋರಿಸುತ್ತಿರಲಿಲ್ಲ. ಹೀಗಾಗಿ ನನಗೆ ವಿರೋಧಿಗಳೇ ಇಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ನನ್ನ ಪರ ನಿಂತಿಲ್ಲ ಎಂದು ಹೇಗೆ ಹೇಳುವುದು. ನಾನು ಮಾಡಿರುವ ಸಹಾಯ, ಸಹಕಾರ ಅವರಿಗೂ ಗೊತ್ತಿದೆ. ಹೀಗಾಗಿ ಅವರೇಕೆ ವಿರೋಧ ಮಾಡುತ್ತಾರೆ. ಏನೋ ಆಗಿದೆ ಅಷ್ಟೆ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

’ಗಾಂಧೀಜಿ ನಡಿಗೆ ಕೃಷ್ಣೆಯ ನಡಿಗೆ‘ ಹೋರಾಟ ಚುನಾವಣೆ ಉದ್ದೇಶಕ್ಕೆ ಮಾಡಿದ್ದಲ್ಲ. ಉತ್ತರ ಕರ್ನಾಟಕದ ಪ್ರತಿಷ್ಠಿತ ನೀರಾವರಿ ಯೋಜನೆ ಇದು. ಅದರ ಅನುಷ್ಠಾನಕ್ಕೆ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ನೇತೃತ್ವದಲ್ಲಿಯೇ ಹೋರಾಟ ಮುಂದುವರೆಯಲಿದೆ. ನಾನು ಎಂಎಲ್‌ಸಿ ಇರಲಿ, ಬಿಡಲಿ ಹೋರಾಟದಿಂದ ಎಂದೆಂದಿಗೂ ವಿಮುಖವಾಗುವುದಿಲ್ಲ’ ಎಂದು ಹೇಳಿದರು.

‘ಆ ಭಗವಂತನಿಗೆ ಗೊತ್ತು’
’ನನಗೆ ಟಿಕೆಟ್ ಕೈ ತಪ್ಪುವುದರಲ್ಲಿರಾಜಕೀಯ ವಿರೋಧಿಗಳ ಪಾತ್ರ ಆ ಭಗವಂತನಿಗೆ ಗೊತ್ತು. ಪ್ರತಿ ಪಕ್ಷದವರೂ ನನ್ನ ಬಗ್ಗೆ ಬೆರಳು ಮಾಡಿ ತೋರಿಸುತ್ತಿರಲಿಲ್ಲ. ಹೀಗಾಗಿ ನನಗೆ ವಿರೋಧಿಗಳೇ ಇಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ನನ್ನ ಪರ ನಿಂತಿಲ್ಲ ಎಂದು ಹೇಗೆ ಹೇಳುವುದು. ನಾನು ಮಾಡಿರುವ ಸಹಾಯ, ಸಹಕಾರ ಅವರಿಗೂ ಗೊತ್ತಿದೆ. ಹೀಗಾಗಿ ಅವರೇಕೆ ವಿರೋಧ ಮಾಡುತ್ತಾರೆ. ಏನೋ ಆಗಿದೆ ಅಷ್ಟೆ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

*
ಇಬ್ಬರಿಗೆ ಟಿಕೆಟ್ ನೀಡಿದರೆ ಹಣದ ಹೊಳೆ ಹರಿಸಬೇಕಿತ್ತು. ಅದು ಸಾಧ್ಯವಿಲ್ಲ. ಚುನಾವಣೆಗೆ ನಿಂತರೂ ಆರ್ಥಿಕವಾಗಿ ಬೀದಿಗೆ ಬರುವಂತಾಗುತ್ತಿತ್ತು. ಹೀಗಾಗಿ ನಾನು ಇಬ್ಬರಿಗೆ ಟಿಕೆಟ್ ಕೊಡುವುದನ್ನು ಒಪ್ಪಿಕೊಳ್ಳಲಿಲ್ಲ.
-ಎಸ್.ಆರ್.ಪಾಟೀಲ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.