ಹುನಗುಂದ: ‘ಭಾರತದಲ್ಲಿರುವ ವಕ್ಫ್ ಭೂಮಿಗಳನ್ನು ದೇಶದ ಬಂಡವಾಳ ಶಾಹಿಗಳ, ಉಳ್ಳವರ ಮತ್ತು ಭೂಗಳ್ಳರ ಕೈಗೆ ನೀಡುವ ಉದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ವಕ್ಫ್ ಕಾನೂನು ತಿದ್ದುಪಡಿ ಮಾಡಿದೆ ಇದೊಂದು ಸಂವಿಧಾನ ವಿರೋಧಿ ಕ್ರಮವಾಗಿದೆ’ ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಅಧ್ಯಕ್ಷ ಜಬ್ಬಾರ ಕಲಬುರ್ಗಿ ಹೇಳಿದರು.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ‘ಸಂವಿಧಾನದ ಮೂಲ ಆಶಯದ ವಿರುದ್ಧವಾಗಿರುವ ಕಾಯ್ದೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಯಾಗದಂತೆ ಕರ್ನಾಟಕ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
‘ವಕ್ಫ್ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಒಂದು ಷಡ್ಯಂತ್ರದ ಭಾಗವಾಗಿದೆ. ಈ ಕಾಯ್ದೆಯಿಂದ ಬಡ ಮುಸ್ಲಿಮರಿಗೆ, ಮಹಿಳೆಯರಿಗೆ, ಅನಾಥ ಮಕ್ಕಳಿಗೆ ಲಾಭವಾಗುವ ಉದ್ದೇಶ ಅಡಗಿದೆ ಎಂದು ಹೇಳಿಕೊಳ್ಳುವ ಮೋದಿ ಸರ್ಕಾರ ಈ ಕಾಯ್ದೆಯಲ್ಲಿ ‘ಲಿಮಿಟೇಷನ್ ಕಾಯ್ದೆ’ ಅಳವಡಿಸಿದ್ದು ಏಕೆ‘ ಎಂದು ಪ್ರಶ್ನಿಸಿದರು.
‘ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿ 17ಕ್ಕೂ ಹೆಚ್ಚು ಟ್ರಿಬ್ಯುನಲ್ ನ್ಯಾಯಾಲಯಗಳು ಕೆಲಸ ಮಾಡುತ್ತಿವೆ. ವಕ್ಫ್ ಟ್ರಿಬ್ರುನಲ್ ಕೂಡ ಇದರಲ್ಲಿ ಒಂದು. ಈಗ ತಂದಿರುವ ಕಾನೂನು ತಿದ್ದುಪಡಿಯಿಂದ ವಕ್ಫ್ ಟ್ರಿಬ್ಯುನಲ್ ನ್ಯಾಯಾಲಯ ಹೊರಗಿಟ್ಟು ಕಂದಾಯ ಇಲಾಖೆಯ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಿದ್ದರಲ್ಲಿ ಸರ್ಕಾರದ ಕಪಟತನ, ಮೊಸ ಅಡಗಿದೆ. ಶಿಘ್ರವೇ ಜಿಲ್ಲಾ ಘಟಕಗಳ ಸಭೆ ಕರೆದು ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.