ಹುಬ್ಬಳ್ಳಿ: ಕರ್ನಾಟಕ ಜನತಾಪಕ್ಷವು (ಕೆಜೆಪಿ) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶ್ರೀಕಾಂತ ಮಗಜಿಕೊಂಡಿ, ರೋಣ ಕ್ಷೇತ್ರದಿಂದ ಕಲಾವಿದೆ ಸುಮತಿ ಎಸ್.ನವಲಿ ಹಿರೇಮಠ ಕಣಕ್ಕಿಳಿಯಲಿದ್ದಾರೆ.
ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪಟ್ಟಿ ಪ್ರಕಟಿಸಿ ‘ಈಗ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಒಟ್ಟು ಮೂರು ಹಂತಗಳಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದರು.
‘ಕೆಜೆಪಿಗೆ ಹಾನಿ ಮಾಡಿದ ಶೋಭಾ ಕರಂದ್ಲಾಜೆ ಎದುರು ಗೆಲ್ಲಲೇಬೇಕು ಎನ್ನುವ ಗುರಿ ನನ್ನದಾಗಿದೆ. ಆದ್ದರಿಂದ, ತೇರದಾಳ ಕ್ಷೇತ್ರದ ಜೊತೆ ಯಶವಂತಪುರದಿಂದಲೂ ಕಣಕ್ಕಿಳಿಯುತ್ತೇನೆ. ಒಂದು ವೇಳೆ ಅವರು ಬೇರೆ ಕ್ಷೇತ್ರದಿಂದ ಸ್ಪರ್ಧಿಸಿದರೆ, ಆ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ’ ಎಂದು ಹೇಳಿದರು.
ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ, ಉತ್ತರ ಕರ್ನಾಟಕದ ಉಸ್ತುವಾರಿ ಕುಮಾರ ಹಂಪಿಹೊಳಿ, ಎಸ್ಸಿ, ಎಸ್ಟಿ ಘಟಕದ ರಾಜ್ಯ ಉಸ್ತುವಾರಿ ಎಚ್.ಎಂ. ಹನುಮಂತಪ್ಪ, ಅಭ್ಯರ್ಥಿಗಳಾದ ವಿ. ಹರೀಶ ಕುಮಾರ, ಹರೀಶ ಇಂಗಳಗುಂದಿ, ಟಿ.ಕೆ. ಹಳ್ಳಿ ಬಸವರಾ, ಶ್ರೀಕಾಂತ ಮಗಜಿಕೊಂಡಿ ಇದ್ದರು.
ಅಭ್ಯರ್ಥಿಗಳು ಹಾಗೂ ಕ್ಷೇತ್ರ: ಪದ್ಮನಾಭ ಪ್ರಸನ್ನ ಕುಮಾರ (ತೇರದಾಳ ಹಾಗೂ ಯಶವಂತಪುರ), ಕುಮಾರ ಹಂಪಿಹೊಳಿ (ಬಾದಾಮಿ), ಹರೀಶ ಇಂಗಳಗುಂದಿ (ಹಿರೇಕೆರೂರ), ಬಸವರಾಜ ಟಿ.ಕೆ. ಹಳ್ಳಿ (ಹಾವೇರಿ), ಶ್ರೀಕಾಂತ ಮಗಜಿಕೊಂಡಿ (ಹುಬ್ಬಳ್ಳಿ–ಧಾರವಾಡ ಸೆಂಟ್ರಲ್), ಅಪ್ಪಣ್ಣ ಹಿರಗಣ್ಣವರ, (ನವಲಗುಂದ), ಜಯಶಂಕರ ಹೊನ್ನೂರ (ಸವದತ್ತಿ), ಭಾರತಿ ಕಾಲೆಭಾಗ (ನಾಗಠಾಣ), ಬಸವರಾಜ ಕಾತರಾಳ (ಬಬಲೇಶ್ವರ),ಶಿವಾನಂದ ವಾಲಿ (ದೇವರ ಹಿಪ್ಪರಗಿ), ಶ್ರೀನಿವಾಸ ಎಕನಾಥ ನವಲೆ (ಜಮಖಂಡಿ), ಭೂಪಾಲಣ್ಣ ಅತ್ತು (ಬೆಳಗಾವಿ ದಕ್ಷಿಣ),
ಶಂಕರ ರೊಟ್ಟಿಗವಾಡ (ಕಲಘಟಗಿ), ವಿ. ಹರೀಶ ಕುಮಾರ (ಹೂವಿನಹಡಗಲಿ), ಮಂಜುನಾಥ ನೀಲಗುಂದ (ಗದಗ), ಸುಮತಿ ಎಸ್. ನವಲಿ ಹಿರೇಮಠ (ರೋಣ), ಮಾರ್ತಾಂಡಪ್ಪ ಎಚ್. ಹಾದಿಮನಿ (ಶಿರಹಟ್ಟಿ), ಅನಂತ ಕುಮಾರ (ರಾಯಬಾಗ) ಸೇರಿದಂತೆ 43 ಮಂದಿಯ ಹೆಸರುಳ್ಳ ಪಟ್ಟಿ ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.