ADVERTISEMENT

ಜಾಗತಿಕ ಸ್ತನ್ಯಪಾನ ಸಪ್ತಾಹ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 6:00 IST
Last Updated 1 ಆಗಸ್ಟ್ 2013, 6:00 IST

ಬಳ್ಳಾರಿ: ಭಾರತೀಯ ಚಿಕ್ಕಮಕ್ಕಳ ತಜ್ಞರ ಅಕಾಡೆಮಿಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಆಗಸ್ಟ್ 1ರಿಂದ 7ರವರೆಗೆ ಜಾಗತಿಕ ಸ್ತನ್ಯಪಾನ ಸಪ್ತಾಹ ಏರ್ಪಡಿಸಲಾಗಿದೆ.

ಆಗಸ್ಟ್ 1ರಂದು ನಗರದ ವಿವಿಧೆಡೆ ಸಪ್ತಾಹದ ಅಂಗವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಆರಂಭವಾಗಲಿದ್ದು, ಆಗಸ್ಟ್ 2ರಂದು ಬೆಳಿಗ್ಗೆ 8.30ಕ್ಕೆ ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿನ ಭಾರತೀಯ ವೈದ್ಯಕೀಯ ಸಂಘದ ಕಚೇರಿಯಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.

ನಗರದ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಬೆಂಗಳೂರು ರಸ್ತೆ, ತೇರು ಬೀದಿ ಮೂಲಕ ಮೋತಿ ವೃತ್ತಕ್ಕೆ ತೆರಳುವ ಜಾಥಾದಲ್ಲಿ ಚಿಕ್ಕಮಕ್ಕಳ ತಜ್ಞರು, ತಜ್ಞ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಅಕಾಡೆಮಿ ಪದಾಧಿಕಾರಿಗಳು, ಸದಸ್ಯರು  ಭಾಗವಹಿಸಲಿದ್ದಾರೆ.
ಆಗಸ್ಟ್ 4ರಂದು ಭಾನುವಾರ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ)ಯ ಶಿಕ್ಷಕರ ಭವನದಲ್ಲಿ ಜಿಲ್ಲೆಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ನಗರ ಕ್ಷೇತ್ರದ ಶಾಸಕ ಅನಿಲ್ ಲಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ದಾವಣಗೆರೆಯ ಡಾ.ಜಿ.ಎಸ್. ಲತಾ ಅವರು ಸ್ತನ್ಯಪಾನದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. `ಎದೆಹಾಲಿನ ಮಹತ್ವ ಕಾಪಾಡುವ ತಾಯಂದರಿಗೆ ಬೆಂಬಲ' ಎಂಬ ಘೋಷ ವಾಕ್ಯದೊಂದಿಗೆ ನಡೆಯಲಿರುವ ಈ ಸಪ್ತಾಹದ ಅಂಗವಾಗಿ ನಗರದ ಆಸ್ಪತ್ರೆಗಳು, ಕೊಳೆಗೇರಿ ಪ್ರದೇಶಗಳು ಹಾಗೂ ವಿವಿಧ ಬಡಾವಣೆಗಳಲ್ಲಿ ಅಕಾಡೆಮಿಯ ಸದಸ್ಯರು, ವಿದ್ಯಾರ್ಥಿಗಳು ಮನೆಮನೆಗೆ ತೆರಳಿ ಸ್ತನ್ಯಪಾನದ ಮಹತ್ವವನ್ನು ತಾಯಂದಿರಿಗೆ ತಿಳಿಸಿಕೊಡಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಕೆ. ಭಾನುಪ್ರಕಾಶ್, ಡಾ.ಬಿ.ಕೆ. ಶ್ರೀಕಾಂತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.