ADVERTISEMENT

ಬಯಲು ಶೌಚಮುಕ್ತ ತಾಲ್ಲೂಕು ಘೋಷಣೆ ಸಾಕಾರಕ್ಕೆ ಶ್ರಮಿಸಿ

ಕೂಡ್ಲಿಗಿ: ತಾ.ಪಂ ಇಒ ಅನ್ನದಾನಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 6:07 IST
Last Updated 7 ಜೂನ್ 2018, 6:07 IST
ಕೂಡ್ಲಿಗಿ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಕೂಡ್ಲಿಗಿ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಕೂಡ್ಲಿಗಿ: ಕಳೆದ ಗಾಂಧಿ ಜಯಂತಿ ದಿನದಂದೇ ತಾಲ್ಲೂಕನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಬೇಕಾಗಿತ್ತು. ಆದರೆ ಇದುವರೆಗೂ ಗುರಿ ಮುಟ್ಟಲಾಗಿಲ್ಲ, ಇನ್ನಾದರು ನಿಗದಿತ ಗುರಿಯನ್ನು ಮುಟ್ಟುವ ಮೂಲಕ ತಾಲ್ಲೂಕನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲು ಅಧಿಕಾರಿ
ಗಳು ಶ್ರಮಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಅನ್ನದಾನಸ್ವಾಮಿ ಹೇಳಿದರು.

ಅವರು ಸ್ಥಳೀಯ ತಾಲ್ಲುಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ತಾಲ್ಲೂಕಿನ 36 ಪಂಚಾಯ್ತಿಗಳಲ್ಲಿ 23 ಪಂಚಾಯ್ತಿಗಳು ಈಗಾಗಲೇ ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಉಳಿದ 13 ಪಂಚಾಯ್ತಿಗಳಲ್ಲಿ ಗುರಿ ಸಾಧನೆ ಮಾಡಬೇಕಾಗಿದೆ. ಶೌಚಾಲಯ ನಿರ್ಮಾಣಕ್ಕೆ ಇರುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಜನರ ಮನವೊಲಿಸಿ ಗುರಿ ಸಾಧನೆಗೆ ಮುಂದಾಗಬೇಕು. ಈ ದಿಶೆಯಲ್ಲಿ ಸಂಬಂಧಿಸಿದ ಪಂಚಾಯ್ತಿ ನೋಡಲ್ ಅಧಿಕಾರಿಗಳು ನಿರಂತರ ಪಂಚಾಯ್ತಿಗೆ ಭೇಟಿ ನೀಡುವುದರ ಮುಖಾಂತರ ಕಾರ್ಯಪ್ರವೃತ್ತರಾಗಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ ರಸ ಗೊಬ್ಬರ ಸಾಕಷ್ಟು ದಾಸ್ತಾನು ಇದೆ. ಆದರೆ ರೈತರು ನಿರ್ಧಿಷ್ಟ ಕಂಪೆನಿಯ ಡಿಎಪಿ ಗೊಬ್ಬರ ಕೇಳುತ್ತಿದ್ದಾರೆ. ಆದರೆ ಎಲ್ಲಾ ಕಂಪೆನಿಯ ಡಿಎಪಿ ಗೊಬ್ಬರ ಒಂದೇ ಅಗಿದ್ದು, ರೈತರು ತಮಗೆ ಲಭ್ಯವಾದ ಡಿಎಪಿ ಗೊಬ್ಬರವನ್ನು ಬಳಸಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವಿ. ಪ್ರಕಾಶ್ ಸಭೆಗೆ ಮಾಹಿತಿ ನೀಡಿದರು.

ADVERTISEMENT

ತರಕಾರಿ ಬೆಳೆಯುವ ರೈತರಿಗೆ 2 ಸಾವಿರ ರೂಪಾಯಿ ಮೌಲ್ಯದ ಬೀಜಗಳನ್ನು ಸಣ್ಣ ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಸುಮಾರು 1 ಸಾವಿರ ಎಕರೆಗೆ ಬೇಕಾಗುವಷ್ಟು ಬೆಂಡೆ, ಹಿರೇಕಾಯಿ, ಮೆಣಸಿಕಾಯಿ ಸೇರಿದಂತೆ ವಿವಿಧ ತರಕಾರಿ ಬೀಜಗಳು ದಾಸ್ತಾನು ಇದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನೀಲಪ್ಪ ಹೇಳಿದರು.

ಪ್ರಕೃತಿ ವಿಕೋಪದಡಿಯಲ್ಲಿ ಮೃತಪಟ್ಟ ಕುರಿಗಳಿಗೆ ಕುರಿ ಅಭಿವೃದ್ಧಿ ನಿಗಮದಿಂದ ಪರಿಹಾರ ಧನ ಬರಲಿದ್ದು, ಇತ್ತೀಚೆಗೆ ಮೃತಪಟ್ಟ ಕುರಿಗಳಿಗೆ ಪರಿಹಾರ ನೀಡಬೇಕಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದ ಹಿನ್ನಲೆಯಲ್ಲಿ ಪರಿಹಾರ ನೀಡುವಲ್ಲಿ ವಿಳಂಭವಾಗಿದ್ದು, ಶೀಘ್ರದಲ್ಲಿಯೇ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್ ಕುಮಾರ್ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ನಡೆಸಲಾಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಹಾಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೆಇಬಿ ಬಸವರಾಜ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.