ಕಂಪ್ಲಿ: ಕಳೆದ ಮೂರು ದಿನಗಳ ನಿರಂತರ ಮಳೆ ಪರಿಣಾಮ ಉಪ್ಪಾರಹಳ್ಳಿ ಕೆರೆ ಏರಿ ಒಡೆದು ಕೆರೆಯಲ್ಲಿ ಸಂಗ್ರಹವಿದ್ದ ನೀರು ಸಂಪೂರ್ಣ ಖಾಲಿಯಾಗಿದೆ.
ಸುಮಾರು 15ಎಕರೆ ಪ್ರದೇಶದ ಈ ಕೆರೆಯಲ್ಲಿ ಸಂಗ್ರಹವಾಗುತ್ತಿದ್ದ ನೀರು ಕೃಷಿ ಚಟುವಟಿಕೆಗೆ ಬಳಸುತ್ತಿರಲಿಲ್ಲ. ಆದರೆ ಜನ, ಜಾನುವಾರು, ಕುರಿಗಳಿಗೆ ವರ್ಷಪೂರ್ತಿ ನೀರು ದೊರೆಯುವ ಮೂಲಕ ಕೆರೆ ಆಸರೆಯಾಗಿತ್ತು. ಜೊತೆಗೆ ಸುತ್ತಲಿನ ನೂರಾರು ಪಂಪ್ಸೆಟ್, ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಲೂ ಈ ಕೆರೆ ಕಾರಣವಾಗಿತ್ತು.
ಜೀವನಾಡಿಯಾಗಿದ್ದ ಉಪ್ಪಾರಹಳ್ಳಿ ಕೆರೆ ಏರಿ ಒಡೆದು ಸದ್ಯ ನೀರೆಲ್ಲ ಖಾಲಿಯಾಗಿವೆ. ಕೆರೆಯನ್ನೇ ನೆಚ್ಚಿಕೊಂಡಿದ್ದ ಈ ಭಾಗದ ರೈತರು, ದನಗಾಹಿಗಳು, ಕುರಿಗಾರರಿಗೆ ಇದರಿಂದ ತೊಂದರೆಯಾಗಿದೆ. ಕೆರೆಗೆ ಹೊಂದಿಕೊಂಡಂತೆ ದರೋಜಿ ಕರಡಿಧಾಮವಿದ್ದು, ಅಲ್ಲಿನ ವನ್ಯಜೀವಿ, ಪ್ರಾಣಿ, ಪಕ್ಷಿ ಸಂಕುಲಕ್ಕೆ ಈ ಕೆರೆಯೂ ಆಸರೆಯಾಗಿತ್ತು ಎಂದು ರೈತರು ತಿಳಿಸಿದರು.
ಇದೇ ಮಳೆಗಾಲದಲ್ಲಿಯೇ ಕೆರೆ ಏರಿ ದುರಸ್ತಿ ಮಾಡಿಸಿದಲ್ಲಿ ನೀರು ಸಂಗ್ರಹವಾಗಿ ಮೊದಲಿನ ಕಳೆ ಮರಳಿ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುವುದು ಕೆರೆ ಸುತ್ತಲಿನ ಕೊಳವೆಬಾವಿ, ಪಂಪ್ಸೆಟ್ ಆಶ್ರಿತ ರೈತರ ಅನಿಸಿಕೆ.
ಮಂಜೂರು: ಉಪ್ಪಾರಹಳ್ಳಿ ಕೆರೆ ಏರಿ ಒಡೆದ ಬಗ್ಗೆ ಜಿ.ಪಂ ಸದಸ್ಯ ಎಂ. ಅನ್ನದಾನರೆಡ್ಡಿ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, ತಾವು ಈಗಾಗಲೇ ಕೆರೆಗೆ ಭೇಟಿ ನೀಡಿದ್ದು, ಏರಿ ದುರಸ್ತಿಗಾಗಿ ಜಿಲ್ಲಾ ಪಂಚಾಯಿತಿಯಿಂದ ರೂ. 30 ಲಕ್ಷ ಮಂಜೂರು ಮಾಡಿಸಿರುವುದಾಗಿ ಹೇಳಿದರು. ಜಿ.ಪಂ.ದಿಂದ ಅನುಮೋದನೆ ದೊರೆಯುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.