ADVERTISEMENT

ರೈತರಿಗೆ ಕಾಲುವೆ ನೀರು: ಡಿ.ಸಿ ಭರವಸೆ

ಸರಳಾದೇವಿ ಸರ್ಕಾರಿ ಕಾಲೇಜಿನ ಸ್ವಾಯತ್ತತೆ ರಕ್ಷಣೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 5:08 IST
Last Updated 27 ಮಾರ್ಚ್ 2018, 5:08 IST
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಏ. 15ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ ಭಾನುವಾರ ಆರಂಭವಾಗಿದ್ದ ಪಾದಯಾತ್ರೆ ಸೋಮವಾರ ಬಳ್ಳಾರಿಯನ್ನು ಪ್ರವೇಶಿಸಿದಾಗ ರೈತರು ಹಸಿರು ಬಾವುಟ ಹಿಡಿದು ನಡೆದರು
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಏ. 15ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ ಭಾನುವಾರ ಆರಂಭವಾಗಿದ್ದ ಪಾದಯಾತ್ರೆ ಸೋಮವಾರ ಬಳ್ಳಾರಿಯನ್ನು ಪ್ರವೇಶಿಸಿದಾಗ ರೈತರು ಹಸಿರು ಬಾವುಟ ಹಿಡಿದು ನಡೆದರು   

ಬಳ್ಳಾರಿ: ‘ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ(ಎಲ್‌ಎಲ್‌ಸಿ)ಗೆ ಏ.15ರವರೆಗೆ ನೀರು ಹರಿಸಬೇಕೆಂದು ಕೋರಿ ನೀರಾವರಿ ಸಲಹಾ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಪತ್ರ ಬರೆದಿದ್ದಾರೆ. ಬೆಳೆ ನಷ್ಟವಾಗುವುದೆಂಬ ಭಯ ಬಿಡಿ’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಸೋಮವಾರ ರೈತರಿಗೆ ಧೈರ್ಯ ತುಂಬಿದರು.

ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಚಾಗನೂರು ಸಿರಿವಾರ ನೀರಾವರಿ ಭೂ ರಕ್ಷಣಾ ಹೊರಾಟ ಸಮಿತಿ ನೇತೃತ್ವದಲ್ಲಿ ಸಿರುಗುಪ್ಪ ತಾಲ್ಲೂಕಿನ ಕರೂರಿನಿಂದ ಭಾನುವಾರ ಪಾದಯಾತ್ರೆ ನಡೆಸಿದ್ದ ರೈತರು ನಗರಕ್ಕೆ ಬಂದು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ’ರೈತರ ಪರವಾಗಿ ಜಿಲ್ಲಾಡಳಿತ ನಿಂತಿದೆ. ಹಾಗಾಗಿಯೇ ಸಚಿವರು ಪತ್ರ ಬರೆದು ಮನವಿ ಮಾಡಿದ್ದಾರೆ. ನಾನು ಕೂಡ ಒಮ್ಮೆ ಗಮನ ಸೆಳೆಯುವೆ’ ಎಂದು ಭರವಸೆ ನೀಡಿದರು.

‘ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ ಸಾಲವನ್ನು ರಾಜ್ಯ ಸರ್ಕಾರ ಈಗಾಗಲೇ ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಾಲವನ್ನು ಮನ್ನಾ ಮಾಡುವುದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು’ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

‘ನಗರದ ಸರಳಾದೇವಿ ಸತೀಶ್‌ಚಂದ್ರ ಅಗರ್‌ವಾಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಶಕ್ಕೆ ನೀಡುವುದಿಲ್ಲ. ಕಾಲೇಜಿನ ಸ್ವಾಯತ್ತತೆಯನ್ನು ಉಳಿಸಲಾಗುವುದು. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಹಿತ ಕಾಪಾಡಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಗುಡುದೂರು ಸುಲೋಚನಮ್ಮ, ಆರ್‌.ಮಾಧವರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಕವಿತಾ ಕೆ.ಸಿ.ರೆಡ್ಡಿ, ಟಿ.ಜಿ.ವಿಠ್ಠಲ್, ಗುರುಸಿದ್ದಮೂರ್ತಿ ಪಾದಯಾತ್ರೆಯ ನೇತೃತ್ವ ವಹಿಸಿದ್ದರು.

ಕಾಲುವೆಯ ಅಚ್ಚುಕಟ್ಟು ವ್ಯಾಪ್ತಿಯ ಹೊಸಪೇಟೆ, ಬಳ್ಳಾರಿ, ಸಿರುಗುಪ್ಪ ತಾಲ್ಲೂಕಿನ ನೂರಾರು ರೈತರು ಬಿಸಿಲನ್ನು ಲೆಕ್ಕಿಸದೆ ಬೆಳಿಗ್ಗೆಯಿಂದಲೇ ನಡೆದುಬಂದರು.

ಪಾದಯಾತ್ರೆಯು ಮಧ್ಯಾಹ್ನ 3ರ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.