ಕೂಡ್ಲಿಗಿ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ 371ನೇ ವಿಧಿಗೆ ತಿದ್ದುಪಡಿ ತರುವುದಕ್ಕೆ ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿರುವುದನ್ನು ಸ್ವಾಗತಿಸಿ ಪಟ್ಟಣದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಜನ್ನು, ಹೈದರಾಬಾದ್ ಕರ್ನಾಟಕದ ಬಹು ದಿನಗಳ ಕನಸನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಈಡೇರಿಸುವಲ್ಲಿ ದೃಢ ಹೆಜ್ಜೆ ಇಟ್ಟಿದೆ. ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಅದನ್ನು ಅನುಮೋದಿಸಿ, ಅನುಷ್ಠಾನಗೊಳಿಸಬೇಕು ಎಂದರು.
ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯನ್ನು ಹೊಂದಿರುವ ಈ ಭಾಗದ ಜಿಲ್ಲೆಗಳ ಭಾಗ್ಯದ ಬಾಗಿಲು ತೆರೆಯಲಿದ್ದು, ಕೇಂದ್ರ ಸರ್ಕಾರ ಈ ತಿದ್ದುಪಡಿಯ ಮೂಲಕ ಹೆಚ್ಚಿನ ಅನುದಾನ ನೀಡಿ, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಎಲ್ಲದಕ್ಕಿಂತ ಹೆಚ್ಚಾಗಿ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿ ಗೊಳಿಸಿ ರೈತರ ಪಾಲಿಗೆ ವರವಾಗ ಬೇಕೆಂದು ಆಶಿಸಿದರು.
ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಎಸ್.ಎಮ್. ಕೃಷ್ಣ, ಧರ್ಮಸಿಂಗ್, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ಹಾಗೂ ಈ ಹೋರಾಟದಲ್ಲಿ ಭಾಗಿಯಾದವರಿಗೆ ಅಭಿನಂದನೆ ಸಲ್ಲಿಸಿದರು.
ಮಾಜಿ ಮಂಡಲ ಅಧ್ಯಕ್ಷ ಎನ್. ಮುದ್ದಪ್ಪ, ನರಸಿಂಹಗಿರಿ ವೆಂಕೆಟೇಶ, ಬೆಳಗಟ್ಟೆ ಗ್ರಾ.ಪಂ ಅಧ್ಯಕ್ಷ ಅಜ್ಜನ ಓಬಯ್ಯ, ಜಿಲ್ಲಾ ಉಪಾಧ್ಯಕ್ಷ ಮರಿ ಯಪ್ಪ, ಡಿಸಿಸಿ ಸದಸ್ಯರಾದ ಹಡಗಲಿ ವೀರಭದ್ರಪ್ಪ, ಪ.ಪಂ. ಸದಸ್ಯರಾದ ಕಾವಲ್ಲಿ ಶಿವಪ್ಪ ನಾಯಕ, ಡಿ.ಎಮ್. ಇಸ್ಮಾಯಿಲ್, ಕಚಾಟಿ ಈಶಪ್ಪ, ಸಿ.ಬಿ.ಸಿದ್ದೆೀಶ್, ಎಂ.ಕುಮಾರ ಸ್ವಾಮಿ, ಸಿ.ಬಿ.ಜಯರಾಂ, ಕ್ಯಾರಿ ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ನೌಶಾದ್, ಟಿ.ರಮೇಶ್, ಐಲಿ ದೊಡ್ಡವೀರಪ್ಪ, ರಾಮಸಾಲಿ ಭರಮಪ್ಪ, ಬುಟ್ಟ ತಿಪ್ಪೇಸ್ವಾಮಿ, ಬೇಕರಿ ಮಹೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.