ADVERTISEMENT

ಸಂಭ್ರಮದ ಈದ್ ಮಿಲಾದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 4:40 IST
Last Updated 6 ಫೆಬ್ರುವರಿ 2012, 4:40 IST

ಸಿರುಗುಪ್ಪ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಭಾನುವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಇಲ್ಲಿಯ ಸೌದಾಗರ್, ಜಾಮಿಯಾ, ಹಾಜಿ, ವಲ್ಲೂರು, ಲಾಡ್‌ಖಾನ್, ನಿಜಾಮಿಯಾ ಜಾಮಾ, ಫೈಜಾನೇ ಗೌಸಿಯ, ಮಹಮ್ಮದಿಯ, ಮದೀನ, ಅಕ್ಬರಿ, ಅಬೂಬಕರ್ ಸಿದ್ದಿಕ್, ಮುರ್ಕಜ್ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಸಾವಿರಾರು ಮುಸ್ಲಿಂ ಬಾಂಧವರು ನಂತರ ಪರಸ್ಪರ  ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಸಂಜೆ ಪಟ್ಟಣದ ಮುಖ್ಯ ಬೀದಿಯಲ್ಲಿ  ಸ್ತಬ್ಧ ಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ನಡೆಸಿದರು.

ಹಗರಿಬೊಮ್ಮನಹಳ್ಳಿ ವರದಿ
ಶಾಂತಿ , ಸಮಾನತೆ ಸಹಿತ ಭಾತೃತ್ವ ಬೋಧಿಸಿದ ಪ್ರವಾದಿ ಮಹಮದ್ ಪೈಗಂಬರ್ ಹುಟ್ಟುಹಬ್ಬ ಈದ್‌ಮಿಲಾದ್‌ನ್ನು ಪಟ್ಟಣದ ಮುಸ್ಲಿಂ ಬಾಂಧವರು ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಇದರ ನಿಮಿತ್ತ ಮುಸ್ಲಿಂ ಬಾಂಧವರು ಇರುವ ಬಡಾವಣೆಗಳು ಹಾಗೂ ಬೀದಿಗಳು ಹಸಿರು ಬಾವುಟ ಮತ್ತು ತೋರಣಗಳಿಂದ ಶೃಂಗರಿಸ ಲಾಗಿತ್ತು. ಹೊಸ ಬಟ್ಟೆಗಳನ್ನು ಧರಿಸಿದ್ದ ಯುವಕರು ಬೈಕ್‌ಗಳಲ್ಲಿ ಬಾವುಟ ಹಿಡಿದು ಸಡಗರದಿಂದ ಓಡಾಡುತ್ತಿದ್ದರು.

ಪಟ್ಟಣದ ಜಾಮಿಯಾ ಮಸೀದಿ, ಮೋಮೀನ್ ಮಸೀದಿ ಹಾಗೂ ನೂರಾನಿ ಮಸೀದಿಗೆ ತಂಡೋಪತಂಡ ವಾಗಿ ಆಗಮಿಸಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಕೋರಿದರು.

ಮಂಡಕ್ಕಿ ಭಟ್ಟಿ ಪ್ರದೇಶದ ಜಾಮಿಯಾ ಮಸೀದಿಯಿಂದ ಪಟ್ಟಣದ ಬಸವೇಶ್ವರ ಬಜಾರ್ ಕಡೆಗೆ ಹೊರಟ ಮೆಕ್ಕ ಮದೀನಾ ಸ್ತಬ್ಧ ಚಿತ್ರದ ಮೆರವಣಿಗೆಗೆ, ಬೈಪಾಸ್ ಬಳಿ ರಾಮನಗರದ ಮೋಮೀನ್ ಮಸೀದಿ ಯಿಂದ ಹೊರಟ ಮುಸ್ಲಿಂ ಬಾಂಧವರು ಕೂಡಿಕೊಂಡಾಗ ಸಡಗರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.  ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಕಿತ್ತಳೆ ಹಣ್ಣು ಪಾನಕ ವಿತರಿಸಲಾಯಿತು.    

ಬೃಹತ್ ಸಂಖ್ಯೆಯಲ್ಲಿದ್ದ ಮುಸ್ಲಿಂ ಸಮುದಾಯದ ಹಿರಿಯರು ಮತ್ತು ಯುವಕರು ಆಕರ್ಷಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯುವ ಸಮು ದಾಯ ಪೈಗಂಬರರ ಉದಾತ್ತ ಧ್ಯೇಯ ಗಳನ್ನು ಅನುರಣಿಸುವ ಘೋಷಣೆ ಗಳನ್ನು ಪ್ರಸ್ತುತಪಡಿಸಿದರು.

ಅಹಲೆ ಸುನ್ನತುಲ್ ಜಮಾತ್ ಅಧ್ಯಕ್ಷ ಎಸ್.ವೈ.ಇಬ್ರಾಹಿಂಸಾಬ್, ಉಪಾಧ್ಯಕ್ಷ ಸೋಗಿ ಬುಡೇನ್‌ಸಾಬ್, ಕಾರ್ಯದರ್ಶಿ ಎಸ್.ನಜೀರ್‌ಸಾಬ್, ಖಜಾಂಚಿ ರಹಮತುಲ್ಲಾ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.