ADVERTISEMENT

ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಿ: ಭಾರದ್ವಾಜ

​ಪ್ರಜಾವಾಣಿ ವಾರ್ತೆ
Published 1 ಮೇ 2012, 5:35 IST
Last Updated 1 ಮೇ 2012, 5:35 IST

ಕಂಪ್ಲಿ:  ಮಹಿಳೆಯರು ಸ್ವ-ಉದ್ಯೋಗದಲ್ಲಿ ತಮ್ಮನ್ನು ತೊಡಗಿಸುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎಸ್.ಕೆ.ಕೆ. ಭಾರದ್ವಾಜ ಮನವಿ ಮಾಡಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ನಬಾರ್ಡ್ ಮತ್ತು ಬಳ್ಳಾರಿ ಪ್ರತಿಭಾ ಮಹಿಳಾ ಮಂಡಳಿ ಆಶ್ರಯದಲ್ಲಿ ಈಚೆಗೆ ಜರುಗಿದ ರೈತ ಮಹಿಳಾ ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳಾ ಗುಂಪಿನ ಅಭಿವೃದ್ಧಿಗಾಗಿ ನಬಾರ್ಡ್ ರೂ. 10ಸಾವಿರ ಮೂರು ವರ್ಷಗಳ ಕಾಲ ನೀಡಲಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ 260ಹಳ್ಳಿಗಳಲ್ಲಿ ಮಹಿಳಾ ರೈತ ಕೂಟಗಳನ್ನು ಆರಂಭಿಸಿದ್ದು, ಭವಿಷ್ಯದಲ್ಲಿ ಸಮಾಜ ಮುಖಿ ಕೆಲಸಗಳನ್ನು ಹಮ್ಮಿಕೊಳ್ಳುವಂತೆಯೂ ಸೂಚಿಸಲಾ ಗಿದೆ ಎಂದರು.

ಉಪ್ಪಾರಹಳ್ಳಿ ಗ್ರಾಮದ ಮಾನಸ ಗಂಗೋತ್ರಿ ಮಹಿಳಾ ಗುಂಪು, ಬಸವೇಶ್ವರ ಕ್ಯಾಂಪ್‌ನ ಸೃಷ್ಟಿ ಗುಂಪು, ಸಣಾಪುರ ಸ್ವಾಮಿ ವಿವೇಕಾನಂದ ಮಹಿಳಾ ಗುಂಪು, ಹೊಸ ನೆಲ್ಲುಡಿ ಝಾನ್ಸಿ ರಾಣಿ ಗುಂಪು, ಅರಳಹಳ್ಳಿ ಬಾಪೂಜಿ, ನಂ.10 ಮುದ್ದಾಪುರ ಗ್ರಾಮದ ನೀಲಾಂಬಿಕ ಮತ್ತು ಕಮಲಾಪುರ ಪಟ್ಟಣದ ನಿಸರ್ಗ ಮಹಿಳಾ ಗುಂಪಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪುರಸಭೆ ಅಧ್ಯಕ್ಷೆ ಹೇಮಾವತಿ ಎಚ್.ಪಿ. ಚಂದ್ರ, ಸದಸ್ಯ ಎನ್. ರಾಮಾಂಜಿನೇಯಲು, ಎಸ್‌ಬಿಎಂ ಸಹಾಯಕ ವ್ಯವಸ್ಥಾಪಕ ರವಿತೇಜ, ಸಿಂಡಿಕೇಟ್ ಬ್ಯಾಂಕ್ ಸುನಿಲ್, ಪಿಜಿಬಿ ಸಿದ್ದೇಶ್ವರ, ಬಳ್ಳಾರಿ ಪ್ರತಿಭಾ ಮಹಿಳಾ ಮಂಡಳಿ ಅಧ್ಯಕ್ಷೆ ಪಿ.ಆರ್. ಸುಜಾತ ರವಿಚಂದ್ರ, ಕಂಪ್ಲಿ ವಲಯ ಮೇಲ್ವಿಚಾರಕಿ ಟಿ.ಎಂ. ನಿರ್ಮಲದೇವಿ, ಕಾರ್ಯದರ್ಶಿ ಅನ್ನಪೂರ್ಣ, ಡಾ. ವೆಂಕಟೇಶ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.