ADVERTISEMENT

ಹಾವು ಕಚ್ಚಿದ್ದಕ್ಕೆ 24 ಇಂಜೆಕ್ಷನ್‌!

ವೈದ್ಯರ ಸಕಾಲಿಕ ಚಿಕಿತ್ಸೆಗೆ ಬದುಕುಳಿದ ಬಾಲಕ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 5:47 IST
Last Updated 16 ಜೂನ್ 2018, 5:47 IST

ಹೊಸಪೇಟೆ: ಹಾವು ಕಚ್ಚಿ, ಮೈಯೆಲ್ಲ ವಿಷ ಹರಡಿ ಕೋಮಾಸ್ಥಿತಿಗೆ ತಲುಪಿದ ತಾಲ್ಲೂಕಿನ ಮಲಪನಗುಡಿಯ ಅಭಿಷೇಕನಿಗೆ (8) ಇಲ್ಲಿನ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಅರ್ಜುನ್‌ ಅವರು ಒಟ್ಟು 24 ಇಂಜೆಕ್ಷನ್‌ ಕೊಟ್ಟು ಜೀವ ಉಳಿಸಿದ್ದಾರೆ.

‘ಅಭಿಷೇಕ ಆಸ್ಪತ್ರೆಗೆ ದಾಖಲಾದಾಗ ಕೋಮಾ ಸ್ಥಿತಿಯಲ್ಲಿ ಇದ್ದ. ಆತ ಬದುಕುಳಿಯುವ ಸಾಧ್ಯತೆ ತೀರ ಕಡಿಮೆ ಇತ್ತು. ಒಟ್ಟು 24 ಇಂಜೆಕ್ಷನ್‌ ಕೊಟ್ಟು, ಸರಿಯಾಗಿ ಉಪಚರಿಸಿದ ಕಾರಣ ಜೀವ ಉಳಿಯಿತು. ಸಂಪೂರ್ಣ ಗುಣಮುಖನಾಗಿರುವ ಅಭಿಷೇಕನನ್ನು ಶುಕ್ರವಾರ ಮನೆಗೆ ಕಳುಹಿಸಿಕೊಡಲಾಗಿದೆ. ಹಾವಿನ ವಿಷಯ ದೇಹದ ತುಂಬೆಲ್ಲ ಪಸರಿಸಿದ ಕಾರಣ 24 ಇಂಜೆಕ್ಷನ್‌ಗಳನ್ನು ಕೊಡಬೇಕಾಯಿತು. ಇಂಥಹ ಪ್ರಕರಣಗಳಲ್ಲಿ ಬದುಕುಳಿಯುವುದು ತೀರ ವಿರಳ’ ಎಂದು ಡಾ.ಅರ್ಜುನ್‌ ತಿಳಿಸಿದರು.

‘ಜೂನ್ 13ರಂದು ಮಲಪನಗುಡಿ ಜನತಾ ಪ್ಲಾಟ್‌ನ ತನ್ನ ಮನೆಯಲ್ಲಿ ಅಭಿಷೇಕ ಮಲಗಿದ್ದಾಗ ಹಾವು ಕಚ್ಚಿತ್ತು. ಇದರಿಂದಾಗಿ ಆತನ ಚರ್ಮದ ಬಣ್ಣ ಬದಲಾಗಿ, ಕೋಮಾ ಸ್ಥಿತಿಗೆ ತಲುಪಿದ್ದ. ಪೋಷಕರು ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಬಳ್ಳಾರಿಯ ವಿಮ್ಸ್‌ಗೆ ಕೊಂಡೊಯ್ಯುವಂತೆ ಹೇಳಿದರು. ಅಲ್ಲಿಯವರೆಗೆ ಮಗ ಬದುಕುಳಿಯುತ್ತಾನೊ ಇಲ್ಲವೋ ಎಂಬ ದುಗುಡದಲ್ಲಿ ಪೋಷಕರು ಒದ್ದಾಡುತ್ತಿದ್ದರು. ವಿಷಯ ತಿಳಿದ ಆಸ್ಪತ್ರೆಯ ವೈದ್ಯ ಅರ್ಜುನ್‌ ಅವರು ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಇದರಿಂದ ಅಭಿಷೇಕನ ಜೀವ ಉಳಿಯಿತು’ ಎಂದು ಬಾಲಕನ ಸಂಬಂಧಿ ಪ್ರಸಾದ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.