ADVERTISEMENT

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಅನಿಲ್ ಲಾಡ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 17:18 IST
Last Updated 17 ಏಪ್ರಿಲ್ 2023, 17:18 IST
ಅನಿಲ್ ಲಾಡ್
ಅನಿಲ್ ಲಾಡ್   

ಬಳ್ಳಾರಿ: ನನಗೆ ಕಾಂಗ್ರೆಸ್ ಟಿಕೆಟ್ ನೀಡದ ಕಾರಣ, ನನ್ನ ರಾಜಕೀಯ ಅಸ್ತಿತ್ವಕ್ಕಾಗಿ ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.

ಅವರು ಇಂದು ನಗರದಲ್ಲಿನ ಬಳ್ಳಾರಿ ಪತ್ರಕರ್ತರ ಒಕ್ಕೂಟದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.

ಕಡಿಮೆ ಮತಗಳ ಅಂತರದಿಂದ ಕಳೆದ ಚುನಾವಣೆಯಲ್ಲಿ ಸೋತ ನನಗೆ ಟಿಕೆಟ್ ತಪ್ಪಿಸಲು ಸ್ಪಷ್ಟ ಕಾರಣ ಹೇಳಿಲ್ಲ. ಅದಕ್ಕಾಗಿ‌ ಬೆಂಬಲಿಗರ ಆಶಯದಂತೆ ಬಂಡಾಯವಾಗಿ ಸ್ಪರ್ಧೆ ಮಾಡಲು ಬಯಸಿರುವೆ ಎಂದರು.

ADVERTISEMENT

ನಾನು ದೆಹಲಿಗೆ ಹೋಗಿ ಕ್ಷೇತ್ರದಲ್ಲಿನ ವಾಸ್ತವಾಂಶಗಳನ್ನು ಎಐಸಿಸಿ ಮುಖಂಡರಾದ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಕಾಣಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ ಎಂದು ಹೇಳಿದ್ದಾರೆ.

ಕೂಡ್ಲಿಗಿಯ ಬಿಜೆಪಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಅವರಿಗೆ, ವಿಜಯನಗರದ ಮಾಜಿ ಶಾಸಕ ಗವಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಕಲಘಟಗಿಯಲ್ಲಿ 25 ಸಾವಿರ ಮತಗಳಿಂದ ಸೋತ ಸಂತೋಷ್ ಲಾಡ್ ಗೆ ಟಿಕೆಟ್ ನೀಡಿದ್ದೀರಿ, ನಿನ್ನೆ ಪಕ್ಷ ಬಿಟ್ಟ ಬಿಜೆಪಿಯವರಿಗೆ ಟಿಕೆಟ್ ಕೊಟ್ಟಿದ್ದೀರಿ. ಇದಕ್ಕೆ ಯಾವುದು ಮಾನದಂಡ ಎಂದು ಪ್ರಶ್ನಿಸಿದ್ದಾರೆ.

ಅದೇ ರೀತಿ. ಯಾವ ಮಾನದಂಡದ ಮೇಲೆ ಬಳ್ಳಾರಿ ನಗರದ ಟಿಕೆಟ್ ಅನ್ನು ಭರತ್ ರೆಡ್ಡಿಗೆ ಕೊಡಲಾಗಿದೆ ಎಂದೂ ಅವರು ಕೇಳಿದ್ದಾರೆ.

ಬಳ್ಳಾರಿಯ ಕಾರ್ಪೊರೇಷನ್ ಕಾಂಗ್ರೆಸ್ ತೆಕ್ಕೆಗೆ ಬರಲು ನಾನು ಕಾರಣ. ನಾನು ಇದೇ 19 ಅಥವಾ 20ರಂದು ನಾಮಪತ್ರ ಸಲ್ಲಿಸುವ ಬಗ್ಗೆ ಆಲೋಚಿಸಿರುವೆ ಎಂದ ಅವರು, ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿದೆ. ಆದ್ದರಿಂದ, ಇಂದಿನಿಂದ ಚುನಾವಣೆ ಮುಗಿಯುವ ವರೆಗೆ ಕಪ್ಪುಬಟ್ಟೆ ಧರಿಸುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.