ಹೊಸಪೇಟೆ (ವಿಜಯನಗರ): ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ 114ನೇ ಜಯಂತಿ ನಗರದ ತಾಲ್ಲೂಕು ಕಚೇರಿ ಆವರದಣಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು.
ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಎಚ್.ವಿಶ್ವನಾಥ್, ‘ಕೊರೊನಾ ಎರಡನೇ ಅಲೆ ಹೆಚ್ಚಾದುದರಿಂದ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ. ಬಾಲ್ಯದಿಂದಲೂ ಸಾಮಾಜಿಕ ಶೋಷಣೆಗಳನ್ನು ಅನುಭವಿಸಿ ಉನ್ನತ ಶಿಖರಕ್ಕೇರಿದ ಜಗಜೀವನ್ರಾಂ 27 ನೇ ವಯಸ್ಸಿನಲ್ಲಿ ಶಾಸನಸಭೆಗೆ ಆಯ್ಕೆಯಾಗಿ, ಮೊದಲ ಕಾರ್ಮಿಕ ಸಚಿವರಾಗಿ, ಕೇಂದ್ರ ಸರ್ಕಾರದಲ್ಲಿ ಎರಡು ಬಾರಿ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದರು’ ಎಂದರು.
‘ರೈಲ್ವೆ ಸಚಿವರಾಗಿ ಹಲವು ಸಾಧನೆಯನ್ನು ಮಾಡಿ, ಮೊರಾರ್ಜಿ ದೇಸಾಯಿ ಅವರ ಅಧಿಕಾರದ ಅವಧಿಯಲ್ಲಿ ಉಪ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದರು. 1971ರ ಬಾಂಗ್ಲಾ ವಿಭಜನೆ ಸಮಯದಲ್ಲಿ ರಕ್ಷಣಾ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ’ ಎಂದು ಸ್ಮರಿಸಿದರು.
ಜಗಜೀವನ್ ರಾಂ ಸಂಘದ ಅಧ್ಯಕ್ಷ ಮೇಕಾಸ್ ಅಂಕಾಳಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ, ಮುಖಂಡರಾದ ದೇವದಾಸ್, ಮಾರಣ್ಣ, ಶೇಕ್ಷಾವಲಿ, ಸೋಮಶೇಖರ್ ಬಣ್ಣದಮನೆ, ಗ್ರೇಡ್-2 ತಹಶೀಲ್ದಾರ್ ಮೇಘನಾ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎ.ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಸಂತ್ ಕುಮಾರ್, ತಾಲ್ಲೂಕು ಕಚೇರಿಯ ಶ್ರೀಧರ್, ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.