
ಬಳ್ಳಾರಿ: ಸ್ವಪಕ್ಷೀಯರ ವಿರೋಧದ ನಡುವೆಯೇ ಬಳ್ಳಾರಿ ಮಹಾನಗರ ಪಾಲಿಕೆಯ 2026–27ನೇ ಸಾಲಿನ ಬಜೆಟ್ ಅನ್ನು ಇಂದು ಮಂಡಿಸಲಾಗುತ್ತಿದೆ. ಪಾಲಿಕೆಯ ಸಾಮಾನ್ಯ ಸಭೆಯನ್ನೂ ಹಲವು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸೋಮವಾರವೇ ನಡೆಸಲಾಗುತ್ತಿದೆ.
‘ಬಜೆಟ್ ಕುರಿತು ಪಾಲಿಕೆಯ ಸದಸ್ಯರ ಜೊತೆ ಪೂರ್ವಭಾವಿ ಸಭೆ ನಡೆಸಿಲ್ಲ. ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಎಲ್ಲಾ ಸದಸ್ಯರ ಜೊತೆ ಚರ್ಚೆ ಮಾಡಿಲ್ಲ ಹೀಗಾಗಿ ಪಾಲಿಕೆಯ ಬಜೆಟ್ ಮತ್ತು ಸಾಮಾನ್ಯ ಸಭೆಯನ್ನು ಮುಂದೂಡಬೇಕು’ ಎಂದು ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್ ನೇತೃತ್ವದ ಕಾರ್ಪೊರೇಟರ್ಗಳ ನಿಯೋಗ ಆಗ್ರಹಿಸಿತ್ತು. ಅದರೆ, ಕಾಂಗ್ರೆಸ್ ವರಿಷ್ಠರ ಸೂಚನೆ ಮೇರೆಗೆ ಬಜೆಟ್ ಮತ್ತು ಸಾಮಾನ್ಯ ಸಭೆ ನಿಗದಿಯಂತೆ ಸೋಮವಾರ ನಡೆಯುತ್ತಿದೆ.
ಇದಕ್ಕೂ ಹಿಂದೆ, ಪಾಲಿಕೆ ಸಾಮಾನ್ಯ ಸಭೆ ವರ್ಷದಿಂದ ನಡೆಯದ ಬಗ್ಗೆ ಬಿಜೆಪಿ ಸದಸ್ಯ ಇಬ್ರಾಹಿಂ ಬಾಬು ಆಕ್ಷೇಪ ವ್ಯಕ್ತಪಡಿಸಿದ್ದರು.
ಹಿಂದಿನ ಬಜೆಟ್ ನಿರ್ಣಯಗಳೇನಾದವು?: ಕಳೆದ ಸಾಲಿನಲ್ಲಿ ₹372.61 ಕೋಟಿ ಗಾತ್ರದ ಬಜೆಟ್ಅನ್ನು ಮಂಡಿಸಲಾಗಿತ್ತು. ಪಾಲಿಕೆಯ ಒಡೆತನದ ಸಣ್ಣ ಮಾರುಕಟ್ಟೆ ಪ್ರದೇಶದಲ್ಲಿ ಹೊಸದಾಗಿ ವಾಣಿಜ್ಯ ಮಳಿಗೆ ನಿರ್ಮಿಸುವುದಾಗಿ ಪಾಲಿಕೆ ಹೇಳಿತ್ತು. ಪಾಲಿಕೆ ಆಸ್ತಿಗಳ ನಿಖರ ಮಾಹಿತಿ ತಿಳಿಯಲು ಡ್ರೋಣ್ ಸರ್ವೆ ಮಾಡುವುದಾಗಿ ತಿಳಿಸಿತ್ತು. ಆದರೆ, ಈ ಕೆಲಸಗಳು ಆಗಿಲ್ಲ.
ನಗರದಲ್ಲಿ ಹೊಸ ಶೌಚಾಲಯಗಳ ನಿರ್ಮಾಣ ಮಾಡುವುದಾಗಿ ಹೇಳಿದ್ದ ಪಾಲಿಕೆ ₹2 ಕೋಟಿ ಅನುದಾನ ಮೀಸಲಿಟ್ಟಿತ್ತು. ಹೊಸ ಶೌಚಾಲಯಗಳು ಎಲ್ಲಿ ನಿರ್ಮಾಣವಾದವು ಎಂಬುದೇ ತಿಳಿಯುತ್ತಿಲ್ಲ. ಚಿತಾಗಾರ ನಿರ್ಮಾಣಕ್ಕೆ ₹4 ಕೋಟಿ ಮೀಸಲಿಡಲಾಗಿತ್ತು. ಇದರ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ.
ಹಿಂದಿನ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದ್ದ ಮಾದರಿ ಆಟೊ ನಿಲ್ದಾಣ, ರಸ್ತೆ, ಉಪ ರಸ್ತೆಗಳಿಗೆ ನಾಮಫಲಕ ಹಾಕುವ ಕಾರ್ಯ ನಡೆದ ಕುರುಹುಗಳಿಲ್ಲ.
ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ (ಎಬಿಸಿ)ಗೆ ₹1.50 ಕೋಟಿ ಕೊಡಲಾಗಿತ್ತು. ಅದರಂತೆ ನಗರದಲ್ಲಿ ನಿತ್ಯ ಹತ್ತಾರು ನಾಯಿಗಳನ್ನು ಹಿಡಿದು ಸಂತಾನ ಹರಣ ಮಾಡುವ ಕಾರ್ಯವಂತೂ ನಡೆಯುತ್ತಿದೆ.
ಬಳ್ಳಾರಿ ಉತ್ಸವ ಮಾಡುವರೇ ಮೇಯರ್
ಹಂಪಿ ಉತ್ಸವದ ರೀತಿಯಲ್ಲಿ ಬಳ್ಳಾರಿ ಉತ್ಸವ ಮಾಡಬೇಕು ಎಂಬ ಮನವಿಯನ್ನು ವರ್ಷದ ಹಿಂದೆ ಸ್ವತಃ ಮೇಯರ್ ಗಾದೆಪ್ಪ ಅವರೇ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಸದ್ಯ ಈಗ ಅವರೇ ಮೇಯರ್ ಆಗಿದ್ದಾರೆ. ಬಳ್ಳಾರಿ ಉತ್ಸವದ ಬಗ್ಗೆ ಅವರೇನಾದರೂ ಕ್ರಮ ಕೈಗೊಂಡಿದ್ದಾರೆಯೇ ಎಂಬುದನ್ನು ನಗರದ ಜನ ಎದುರು ನೋಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.