
ಬಳ್ಳಾರಿ: ನಗರದ ದುರ್ಗಮ್ಮ ದೇವಸ್ಥಾನದ ರೈಲ್ವೆ ಬ್ರಿಡ್ಜ್ ಮೇಲೆ ಅಪಾಯಕಾರಿ ರೀಲ್ಸ್ ಮಾಡಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬ್ರೂಸ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ನಂದಾಲಪುರ, ರಾಜ್ಪುರ ರಾನಿಯಾ ಗ್ರಾಮದ, ಸದ್ಯ ಬಳ್ಳಾರಿ ನಗರದ ನಕ್ಷತ್ರ ಹೋಟೆಲ್ ಹಿಂಭಾಗ ನೆಲೆಸಿರುವ ವಿಶ್ವನಾಥ (29) ಬಂಧಿತ.
ಫೆಬ್ರುವರಿ 14ರಂದು ವಿಶ್ವನಾಥ ಅಪಾಯಕಾರಿ ರೀತಿಯಲ್ಲಿ ನೃತ್ಯ ಮಾಡಿ ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ. ಇದನ್ನು ಜಿಲ್ಲಾ ಪೊಲೀಸ್ ಕಚೇರಿಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ ಘಟಕ (ಎಸ್ಎಂಎಂಸಿ) ಪತ್ತೆಹಚ್ಚಿತು.
ಆರೋಪಿಯನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ ಬ್ರೂಸ್ಪೇಟೆ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರಂತೆ, ವಿಶ್ವನಾಥನನ್ನು ಬಂಧಿಸಿರುವ ಬ್ರೂಸ್ಪೇಟೆ ಪೊಲೀಸರು, ಕಾನೂನು ಕ್ರಮ ಕೈಗೊಂಡಿದ್ದಾರೆ.
ಆರೋಪಿ ವಿಶ್ವನಾಥ ನಗರದ ವಿವಿಧ ಕಡೆಗಳಲ್ಲಿ ಹೀಗೆ ಅಪಾಯಕಾರಿ ವಿಡಿಯೊಗಳನ್ನು ಚಿತ್ರೀಕರಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ.
ಜಿಲ್ಲಾ ಪೊಲೀಸ್ ಕಚೇರಿ ಹಾಗೂ ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಪೋಸ್ಟ್ಗಳ ಮೇಲೆ ನಿಗಾ ವಹಿಸಲಾಗಿದೆ. ಪ್ರಾಣಾಪಾಯ ಸ್ಥಳಗಳಲ್ಲಿ ವಿಡಿಯೊ ಮಾಡುವ, ಕೋಮು ಪ್ರಚೋದಿತ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ವಿಡಿಯೊ/ಪೋಸ್ಟರ್ಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಸ್.ಪಿ ಸುಮನ್ ಡಿ.ಪಿ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.