ಬಳ್ಳಾರಿ: ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಮೂವರು ರೈತರು ಕಾಶಿಯಲ್ಲಿ ನಿಗದಿತ ಸಮಯಕ್ಕೆ ರೈಲು ಹತ್ತಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು ದೆಹಲಿಯಿಂದ ಕಾಶಿಗೆ ಬಂದು ಅಲ್ಲಿಂದ ಗದಗ್ವರೆಗೆ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿಕೊಂಡಿದ್ದರು.
‘ಕಾಶಿಗೆ ಶನಿವಾರ ಸಂಜೆ 6 ಗಂಟೆಗೆ ಪ್ರಯಾಣ ಬೆಳೆಸಿ ಭಾನುವಾರ ಬೆಳಿಗ್ಗೆ ದೆಹಲಿಗೆ ಬರಬೇಕಿದ್ದ ರೈಲು ದಟ್ಟ ಮಂಜು ಹಬ್ಬಿದ್ದ ಕಾರಣ ಭಾನುವಾರ ಬೆಳಗಿನ ಜಾವ ಬಂದಿತ್ತು. ನಾವು ಕಾಶಿಯಲ್ಲಿ ಬೆಳಿಗ್ಗೆ 9.05ಕ್ಕೆ ರೈಲು ಹತ್ತಬೇಕಿತ್ತು. ಆದರೆ ಅಲ್ಲಿಗೆ ಭಾನುವಾರ ರಾತ್ರಿ ಬಂದೆವು. ಹೀಗಾಗಿ ರೈಲು ನಮ್ಮ ಕೈ ತಪ್ಪಿತು’ ಎಂದು ರೈತ ಮುಖಂಡ ವೀರಸಂಗಯ್ಯ ಸೋಮವಾರ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಗೆ ಕಾಶಿಯಿಂದಲೇ ಪ್ರತಿಕ್ರಿಯಿಸಿದರು.
‘ನಮ್ಮ ಬಳಿ ಹೆಚ್ಚು ಹಣವಿಲ್ಲ. ರೈಲು ತಡವಾಗಿ ಬಂದ ಕಾರಣ ಕಾಯ್ದಿರಿಸಿದ ಟಿಕೆಟ್ನ ಮೊತ್ತವನ್ನು ವಾಪಸು ನೀಡುವಂತೆ ರೈಲು ನಿಲ್ದಾಣದ ಅಧಿಕಾರಿಗಳನ್ನು ಕೇಳಿದರು. ಆದರೆ ಪ್ರಾಕೃತಿಕ ಸಮಸ್ಯೆಗಳಿಂದ ಅಡಚಣೆಯಾದರೆ ಹಣ ವಾಪಸ್ ನೀಡಲ್ಲ ಎಂದು ಅಧಿಕಾರಿಗಳು ತಿಳಿಸದ್ದು, ನಾವು ಬಳ್ಳಾರಿಗೆ ವಾಪಸು ಬರುವುದು ಕಷ್ಟಕರವಾಗಿದೆ’ ಎಂದರು.
ಮನವಿ: ‘ನಾವು ಅತಂತ್ರ ಸ್ಥಿತಿಯಲ್ಲಿದ್ದು ಬಳ್ಳಾರಿ ಜಿಲ್ಲೆಯ ಜನ ನಮಗೆ ಆರ್ಥಿಕವಾಗಿ ಸಹಾಯ ಮಾಡಿದರೆ ಮಾತ್ರ ವಾಪಸು ಬರಲು ಸಾಧ್ಯ. ಜಿಲ್ಲಾಡಳಿತ, ಜನಪ್ರತಿನಿಧಿಗಳ ನೆರವನ್ನೂ ನಿರೀಕ್ಷಿಸುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.