
ಬಳ್ಳಾರಿ: ಪ್ರವಾಸಕ್ಕೆಂದು ಹೋಗಿ ದುಬೈನಲ್ಲಿ ಸಿಲುಕಿರುವವರಿಗೆ ಅಲ್ಲಿನ ಮತ್ತು ಇಲ್ಲಿನ ಸರ್ಕಾರಗಳಿಂದ ನೆರವು ಸಿಕ್ಕಿದೆಯೋ ಇಲ್ಲವೋ, ಆದರೆ, ಕನ್ನಡ ಸಂಘಗಳು, ಸ್ನೇಹಿತರು ನೆರವಾಗುತ್ತಿದ್ದಾರೆ ಎಂದು ಕುಟುಂಬಗಳ ಮೂಲಗಳು ತಿಳಿಸಿವೆ.
ಇರಾನ್ ಮೇಲೆ ಅಮೆರಿಕ ದಾಳಿ ನಡೆಸುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ಕೂಡ ದಾಳಿ ಮಾಡುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಆವರಿಸಿದೆ. ವೈಮಾನಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಬಳ್ಳಾರಿಯ 32 ಮಂದಿ ಸೇರಿದಂತೆ ನೂರಾರು ಕನ್ನಡಿಗರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಬಳ್ಳಾರಿಯ 32 ಮಂದಿಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರ ಐವರು ಕುಟುಂಬ ಸದಸ್ಯರನ್ನು ಹೊರತುಪಡಿಸಿದರೆ ಉಳಿದವರು ಪ್ಯಾಕೇಜ್ ಟ್ರಿಪ್ಗೆ ಹೋಗಿದ್ದವರು. ಇದರಲ್ಲಿ ಯಾಳ್ಪಿ ಪಂಪನಗೌಡ ಎಂಬುವವರ ಒಂದೇ ಕುಟುಂಬದ 15 ಸದಸ್ಯರಿದ್ದಾರೆ. ಇವರಲ್ಲಿ ಹಲವರು ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ.
ಫೆ. 23ರಂದು ಯುಎಇ ಪ್ರವಾಸಕ್ಕೆ ತೆರಳಿದ್ದ ಈ ತಂಡ, ಐದು ದಿನಗಳ ಪ್ರವಾಸ ಮುಗಿಸಿ ಫೆ. 28ರಂದು ಶಾರ್ಜಾ ಮೂಲಕ ಭಾರತಕ್ಕೆ ಮರಳಬೇಕಾಗಿತ್ತು. ಆದರೆ, ಕಡೇ ಗಳಿಗೆಯಲ್ಲಿ ವಿಮಾನ ರದ್ದುಗೊಂಡಿತು. ಹೀಗಾಗಿ ಎಲ್ಲರೂ ದುಬೈ ನಗರಕ್ಕೆ ಮರಳಬೇಕಾಯಿತು. ಇವರ ಯೋಗಕ್ಷೇಮಕ್ಕಾಗಿ ಅಲ್ಲಿನ ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ ಎನ್ನಲಾಗಿದೆ. ಕನ್ನಡಿಗರು ಅತಂತ್ರರಾಗಿದ್ದಾರೆ ಎಂಬುದು ದಿನವಿಡೀ ಸುದ್ದಿಯಾಗುತ್ತಿದ್ದರೂ, ನಮ್ಮಲ್ಲಿನ ಸರ್ಕಾರಗಳೂ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಸದ್ಯ, ಅಲ್ಲಿನ ಕನ್ನಡ ಸಂಘಗಳು, ಶಾಸಕ ಬಿ.ನಾಗೇಂದ್ರ ಅವರ ಸ್ನೇಹಿತರು, ಡ್ರೋಣ್ ಪ್ರತಾಪ್ ಮತ್ತು ಇತರರು ಬಳ್ಳಾರಿ ಮೂಲದವರಿಗೆ ನೆರವು ನೀಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಎಲ್ಲರನ್ನೂ ದುಬೈ ಹೊರವಲಯದ ‘ಗೋಲ್ಡನ್ ಸ್ಯಾಂಡ್ಸ್’ ಬಳಿಯ ‘ಎಕ್ಸ್ಕ್ಲೂಸಿವ್–ಮೈ ಹೋಮ್ ಇನ್ ದುಬೈ’ ಎಂಬ ಸರ್ವಿಸ್ ಅಪಾರ್ಟ್ಮೆಂಟ್ವೊಂದರಲ್ಲಿ ಉಳಿಸಲಾಗಿದೆ. ಅವರಿಗೆ ಬೇಕಾದ ಆಹಾರ ವ್ಯವಸ್ಥೆಯನ್ನು ಅಲ್ಲಿ ಕಲ್ಪಿಸಲಾಗಿದೆ. ಪ್ರವಾಸಕ್ಕೆ ಹೋಗಿದ್ದವರಲ್ಲಿ ಬಹುತೇಕರು ವಯಸ್ಸಾದವರೇ ಆಗಿದ್ದು, ಮಾತ್ರೆ–ಮದ್ದುಗಳು ಖಾಲಿಯಾಗಿವೆ. ಹೀಗಾಗಿ ಎಲ್ಲರಿಗೂ ಸೋಮವಾರ ಆರೋಗ್ಯ ತಪಾಸಣೆ ನಡೆಸಲಾಯಿತು ಎಂದು ಯಾಳ್ಪಿ ಪಂಪನಗೌಡ ಅವರ ಪುತ್ರ ದಿವಾಕರ ಗೌಡ ಮಾಹಿತಿ ನೀಡಿದರು.
ಬಳ್ಳಾರಿಗರು ತಂಗಿರುವ ಸರ್ವಿಸ್ ಅಪಾರ್ಟ್ಮೆಂಟ್ ಸುತ್ತಲ ಪ್ರದೇಶದಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿಬರುತ್ತಿದೆ ಎನ್ನಲಾಗಿದೆ. ಆದರೆ, ನಾಗರಿಕ ಪ್ರದೇಶಗಳಲ್ಲಿ ಏನೂ ತೊಂದರೆಯಾಗಿಲ್ಲ ಎಂದು ಗೊತ್ತಾಗಿದೆ.
ದುಬೈನಲ್ಲಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ಸೋಮವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು ತಾವು ತಮ್ಮ ಕುಟುಂಬ ಮತ್ತು ಬಳ್ಳಾರಿಯಿಂದ ಬಂದಿದ್ದವರು ಸುರಕ್ಷಿತರಾಗಿ ಇರುವುದಾಗಿ ಸಂದೇಶ ನೀಡಿದ್ದಾರೆ. ‘ನನ್ನ ಯೋಗಕ್ಷೇಮ ವಿಚಾರಿಸಲು ಹಲವರು ಕರೆ ಮಾಡಿದ್ದಾರೆ. ನಾನು ಕುಟುಂಬ ಕ್ಷೇಮವಾಗಿದ್ದೇವೆ. ಬಳ್ಳಾರಿಯಿಂದ ಬಂದಿರುವವರೂ ಸುರಕ್ಷಿತರಾಗಿದ್ದಾರೆ. ಅವರಿಗೆ ನೆರವಾಗಲು ನನ್ನ ಕಚೇರಿಯ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ದುಬೈನಲ್ಲಿ ಸಿಲುಕಿರುವವರ ಪಟ್ಟಿಯನ್ನು ರಾಜ್ಯ ಸರ್ಕಾರದ ಮೂಲಕ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ. ಶೀಘ್ರವೇ ವೈಮಾನಿಕ ಸೇವೆ ಆರಂಭವಾಗುವ ವಿಶ್ವಾಸವಿದೆ. ವಿಮಾನ ಸೇವೆ ಆರಂಭವಾಗುತ್ತಲೇ ಜನರನ್ನು ಕರೆತರಲಾಗುವುದು’ ಎಂದು ಅವರು ಸಂದೇಶದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.