ADVERTISEMENT

ಘರ್ಷಣೆ | ಸತ್ಯ ಶೋಧನಾ ಸಮಿತಿಯಿಂದ ಪರಿಶೀಲನೆ: ಬಳ್ಳಾರಿಗೆ ರೇವಣ್ಣ ನೇತೃತ್ವದ ತಂಡ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 2:47 IST
Last Updated 4 ಜನವರಿ 2026, 2:47 IST
ಘರ್ಷಣೆ ನಡೆದ ಬಳ್ಳಾರಿ ನಗರದ ಅವ್ವಂಬಾವಿಯ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ ಕಾಂಗ್ರೆಸ್‌ ಸತ್ಯ ಶೋಧನಾ ಸಮಿತಿ. 
ಘರ್ಷಣೆ ನಡೆದ ಬಳ್ಳಾರಿ ನಗರದ ಅವ್ವಂಬಾವಿಯ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ ಕಾಂಗ್ರೆಸ್‌ ಸತ್ಯ ಶೋಧನಾ ಸಮಿತಿ.    

ಬಳ್ಳಾರಿ: ಬಳ್ಳಾರಿಯಲ್ಲಿ ಗುರುವಾರ ರಾತ್ರಿ ನಡೆದಿದ್ದ ಎರಡು ಘರ್ಷಣೆಗಳು, ಕಾರ್ಯಕರ್ತನ ಕೊಲೆ, ಇದಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಲು ಬಳ್ಳಾರಿಗೆ ಬಂದ ಎಚ್‌.ಎಂ ರೇವಣ್ಣ ನೇತೃತ್ವದ ಕಾಂಗ್ರೆಸ್‌ ಸತ್ಯಶೋಧನಾ ಸಮಿತಿಯ ಎದುರು ಕಾರ್ಯಕರ್ತರು ಮಿಶ್ರ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.  

‘ತಪ್ಪು ಎರಡೂ ಕಡೆಗಳಿಂದ ಆಗಿದೆ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, ‘ನಾರಾ ಭರತ್‌ ರೆಡ್ಡಿ ಮತ್ತು ಸತೀಶ್‌ ರೆಡ್ಡಿ ನಡೆಯೇ ಇಷ್ಟೆಲ್ಲಕ್ಕೂ ಕಾರಣ’ ಎಂದಿದ್ದಾರೆ. ‘ಕಾಂಗ್ರೆಸ್‌ಗೆ ಇದು ಅಗತ್ಯವಿರಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ’ ಎಂದು ಗೊತ್ತಾಗಿದೆ.  

ಕಾಂಗ್ರೆಸ್‌ ಅಧ್ಯಕ್ಷರ ಸೂಚನೆ ಮೇರೆಗೆ ಕರ್ನಾಟಕ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್‌.ಎಂ ರೇವಣ್ಣ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಚಳ್ಳಕೆರೆ ಶಾಸಕ ರಘುಮೂರ್ತಿ, ಲೋಕಸಭಾ ಸದಸ್ಯ ಕುಮಾರ್‌ ನಾಯಕ್‌, ಪರಿಷತ್‌ ಸದಸ್ಯರಾದ ಜಕ್ಕಪ್ಪನವರ್‌, ಬಸವನಗೌಡ ಬಾದರ್ಲಿ ಬಳ್ಳಾರಿಗೆ ಬಂದು ಸರ್ಕಾರಿ ಅತಿಥಿ ಗೃಹದಲ್ಲಿ ವಿವಿಧ ಸಮುದಾಯಗಳು, ಮುಖಂಡರು ಮತ್ತು ಸಂಬಂಧಿಸಿದವರ ಜೊತೆ ಚರ್ಚೆ ನಡೆಸಿದರು. 

ADVERTISEMENT

ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್ ಅವರ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಯೂ ನಿಯೋಗ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡಿತು ಎಂದು ಗೊತ್ತಾಗಿದೆ. 

ನಿಯೋಗ ಭೇಟಿ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಎಂ.ರೇವಣ್ಣ ಅವರು, ‘ಚುನಾಯಿತ ಪ್ರತಿನಿಧಿಗಳು, ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳಿಂದ ಘಟನೆ ಕುರಿತು ಮನವರಿಕೆ ಮಾಡಿಕೊಂಡಿದ್ದೇವೆ. ವರದಿಯನ್ನು ಮೂರು ದಿನದೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ನಿಯೋಗದ ವರದಿಯನ್ನು ಮಾಧ್ಯಮಗಳಿಗೆ ತಿಳಿಸುವಂತಿಲ್ಲ. ಸರ್ಕಾರವೇ ಇದನ್ನು ಬಹಿರಂಗಪಡಿಸುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಅಮಾನತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಮೃತ ಯುವಕನ ಕುಟುಂಬಕ್ಕೆ ಸರ್ಕಾರ ಹಾಗೂ ಪಕ್ಷ ನೆರವು ನೀಡಲಿದೆ’ ಎಂದು ತಿಳಿಸಿದರು.

ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜೆ.ಎಸ್.ಆಂಜಿನೇಯಲು, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜಗೌಡ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

ಬಳ್ಳಾರಿ ಗಲಭೆ  ಪ್ರಕರಣ ತೀವ್ರ ಬೇಸರ ತಂದಿದೆ. ಬಳ್ಳಾರಿ ಜನರ ಕ್ಷಮೆ ಕೋರುತ್ತೇನೆ. ಸಂವಿಧಾನ ರಚನೆ ಮಾಡುವ ನಾವು ಅದನ್ನು ಪಾಲನೆ ಮಾಡಬೇಕು. ಜನಾರ್ದನ ರೆಡ್ಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯಬಾರದಿತ್ತು. ಮುಖ್ಯಮಂತ್ರಿಯೂ ಬೇಸರರಾಗಿದ್ದಾರೆ. ಖಂಡಿತ ಕಾನೂನು ಕ್ರಮ ಜರುಗಲಿದೆ 
– ಇ ತುಕಾರಾಂ ಬಳ್ಳಾರಿ ಸಂಸದ