
ಗಾಂಜಾ
ಬಳ್ಳಾರಿ: ಬಳ್ಳಾರಿ ಮಾರ್ಗದ ‘18111–ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್’ ರೈಲಿನಲ್ಲಿ ಸಾಗಣೆ ಮಾಡಲಾಗುತ್ತಿದ್ದ ಐದು ಕೆ.ಜಿ ಗಾಂಜಾವನ್ನು ರೈಲ್ವೆ ರಕ್ಷಣಾ ದಳದ (ಆರ್ಪಿಎಫ್) ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ನ. 1ರಂದು ಘಟನೆ ನಡೆದಿದ್ದು, ವಶಕ್ಕೆ ಪಡೆದ ಗಾಂಜಾ ಮೌಲ್ಯ ₹50 ಸಾವಿರ ಎಂದು ಅಂದಾಜಿಸಲಾಗಿದೆ. ಈ ಕುರಿತು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾರ್ಖಂಡ್ನ ಟಾಟಾ ನಗರ ಜಂಕ್ಷನ್ನಿಂದ ಬೆಂಗಳೂರಿನ ಯಶವಂತಪುರ ನಡುವೆ ವಾರದಲ್ಲಿ ಒಮ್ಮೆ ಮಾತ್ರ ಸಂಚರಿಸುವ ರೈಲನ್ನು ರೈಲ್ವೆ ಪೊಲೀಸರು ಮತ್ತು ಆರ್ಪಿಎಫ್ ಅಧಿಕಾರಿಗಳು ನ. 1ರಂದು ಪರಿಶೀಲನೆ ನಡೆಸಿದ್ದರು.
ಈ ವೇಳೆ ಆಸನವೊಂದರ ಕೆಳಗೆ ಪೊಟ್ಟಣವೊಂದು ಪತ್ತೆಯಾಗಿತ್ತು. ಆದರೆ, ಅದನ್ನು ಸಾಗಿಸಿ ತರುತ್ತಿರುವವರು ಯಾರೂ ಪತ್ತೆಯಾಗಲಿಲ್ಲ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ಯಚರಣೆಯಲ್ಲಿ ಆರ್ಪಿಎಫ್ ಕಮಾಂಡರ್ ಸಿದ್ದಲಿಂಗಪ್ಪ, ರೈಲ್ವೆ ಪೊಲೀಸ್ನ ಠಾಣಾಧಿಕಾರಿ ಜಿ. ನಾಗರಾಜ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
18111–ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ನಲ್ಲಿ ಆಗಿಂದ್ದಾಗೆ ಗಾಂಜಾ ಸಾಗಣೆಯಾಗುತ್ತಿರುವುದರ ಕುರಿತು ರೈಲ್ವೆ ಪೊಲೀಸರು ಮತ್ತು ರಕ್ಷಣಾ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.