ಬಳ್ಳಾರಿ: ‘ಸ್ವಾಧೀನಪಡೆದಿರುವ ಜಮೀನಿನಲ್ಲಿ ಉದ್ಯಮ ಆರಂಭಿಸಿ, ನಮಗೆ ಉದ್ಯೋಗ ಕೊಡಿ. ನ್ಯಾಯಯುತ ಪರಿಹಾರ ಕೊಡಿ. ಇಲ್ಲವೇ ಜಮೀನು ವಾಪಸು ಕೊಡಿ’ ಎಂಬ ಬೇಡಿಕೆಯೊಂದಿಗೆ ಆರಂಭಗೊಂಡ ಕುಡುತಿನಿ ಭೂಸಂತ್ರಸ್ತರ ಹೋರಾಟ ಶುಕ್ರವಾರ 944ನೇ ದಿನ ತಲುಪಿತು. ಸರ್ಕಾರ ಇನ್ನೂ ಸ್ಪಂದಿಸಿಲ್ಲ.
ಹೋರಾಟ 692ನೇ ದಿನ (2024ರ ನವೆಂಬರ್ 8) ತಲುಪಿದ್ದಾಗ, ಸಂಡೂರು ಕ್ಷೇತ್ರದ ಉಪ ಚುನಾವಣೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇಲ್ಲಿನ ರೈತರಿಗೆ ಅನ್ಯಾಯವಾಗಿದೆ. ಅವರನ್ನು ಕೇಳದೇ ಭೂಮಿ ವಶಕ್ಕೆ ಪಡೆದಿರುವ ಆರೋಪವಿದೆ. ರೈತರ ಹಿತದೃಷ್ಟಿಯಿಂದ ಏನು ಮಾಡಲು ಸಾಧ್ಯವೋ, ಅದನ್ನು ಶೀಘ್ರ ಮಾಡುವೆ. ಈ ಬಾರಿ ಚುನಾವಣೆಯಲ್ಲಿ ಬೆಂಬಲಿಸಿ’ ಎಂದಿದ್ದರು.
ಹೋರಾಟ ಆರಂಭವಾಗಿ ಎರಡೂವರೆ ವರ್ಷ ಮತ್ತು ಮುಖ್ಯಮಂತ್ರಿ ಭೇಟಿ ನೀಡಿ ವರ್ಷ ಕಳೆದರೂ ಭೂ ಸಂತ್ರಸ್ತರ ಬೇಡಿಕೆ ಈಡೇರಿಲ್ಲ. ಈವರೆಗೆ ಸಣ್ಣ ಕಾರ್ಖಾನೆಯೂ ಬಂದಿಲ್ಲ. ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಉದ್ದೇಶ ಈಡೇರಿಲ್ಲ. ರೈತರು ಸಾಗುವಳಿ ಮಾಡಲೂ ಆಗಿಲ್ಲ. ಪರಿಣಾಮ, 10 ಸಾವಿರ ಎಕರೆಗೂ ಅಧಿಕ ಜಮೀನು ಪಾಳುಬಿದ್ದಿದೆ. ಕಾರ್ಖಾನೆಗಳು ಬರುತ್ತವೊ, ಇಲ್ಲವೊ ಎಂದು ಅಧಿಕಾರಿಗಳು ಖಚಿತಪಡಿಸಿಲ್ಲ.
ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರ 2010ರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರ ವ್ಯಾಪ್ತಿಯ ಕುಡುತಿನಿ ಮತ್ತು ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ 12 ಸಾವಿರ ಎಕರೆಗೂ ಅಧಿಕ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ವಶಕ್ಕೆ ಪಡೆಯಿತು.
ಇದರಲ್ಲಿ, ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ 2,643 ಎಕರೆ, ಉತ್ತಮ ಗಾಲ್ವ ಕಂಪನಿಗೆ 4,877 ಎಕರೆ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮಕ್ಕೆ (ಎನ್ಎಂಡಿಸಿ) 2,843 ಎಕರೆ ಸೇರಿದಂತೆ ಒಟ್ಟು 10,363 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿದೆ. ಈ ಭೂಮಿ ಈಗ ಬರಡಾಗಿ ಬಿದ್ದಿದೆ.
4,877 ಎಕರೆ ಭೂಮಿ ಹೊಂದಿರುವ ಉತ್ತಮ ಗಾಲ್ವ ಸಂಸ್ಥೆ ಕಬ್ಬಿಣ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದ್ದು, ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ. ಪರಿಸರ ಅನುಮೋದನೆ (ಇ.ಸಿ) ವಿಳಂಬವಾಗುತ್ತಿದೆ ಎನ್ನಲಾಗಿದೆ. ಆರ್ಸೆಲರ್ ಮಿತ್ತಲ್ ಕಂಪನಿ ಉದ್ದಿಮೆ ಸ್ಥಾಪಿಸುವ ಯಾವುದೇ ಕುರುಹು ಕಾಣಿಸಿಲ್ಲ.
‘ಸದ್ಯ ಪಾಳು ಬಿದ್ದಿರುವ ಜಮೀನು ಹಿಂಪಡೆದು ಬೇರೆ ಕಂಪನಿಗಳು, ಬೃಹತ್ ಉದ್ದಿಮೆ ಸ್ಥಾಪನೆಗೆ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಹಲವು ಸಭೆಗಳೂ ಆಗಿವೆ’ ಎಂದು ಕೆಐಎಡಿಬಿ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.
ಪರಿಹಾರ ಸಿಗಲಿಲ್ಲ. ಉದ್ದಿಮೆ ಸ್ಥಾಪನೆ ಆಗಲಿಲ್ಲ. ಭೂಮಿ ಕಳೆದುಕೊಂಡವರ ಮಕ್ಕಳಿಗೆ ಉದ್ಯೋಗ ಸಿಗಲಿಲ್ಲ. ಬೇಡಿಕೆಗಳ ಈಡೇರಿಕೆಗೆ ಆಗಸ್ಟ್ 20ರಂದು ಬಳ್ಳಾರಿ ಬಂದ್ ಮಾಡುತ್ತೇವೆಸತ್ಯಬಾಬು ಕಾರ್ಯದರ್ಶಿ ಸಿಪಿಎಂ ಜಿಲ್ಲಾ ಘಟಕ
ಎರಡೂವರೆ ವರ್ಷದಿಂದ ಹೋರಾಟ ನಡೆಸಿದ್ದೇವೆ. ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿಯೇ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲತಿಪ್ಪೇಸ್ವಾಮಿ ಕುಡುತಿನಿ ಭೂಸಂತ್ರಸ್ಥ ಹೋರಾಟಗಾರ
‘ಎಚ್ಡಿಕೆ ಸಚಿವರಾದರೂ ಕಾರ್ಖಾನೆ ಬಂದಿಲ್ಲ’
ಕೇಂದ್ರ ಸರ್ಕಾರದ ಉಕ್ಕು ಸಚಿವಾಲಯದ ಅಧೀನದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ) ಬಳ್ಳಾರಿ ಹೊರವಲಯದ ವೇಣಿವೀರಾಪುರ ಬಳಿ ಉಕ್ಕಿನ ಕಾರ್ಖಾನೆ ಸ್ಥಾಪಿಸಲು 2843 ಎಕರೆ ಜಾಗ ಪಡೆದಿದೆ. ಸಂಡೂರಿನಲ್ಲಿ ಎರಡು ಬೃಹತ್ ಗಣಿ ಹೊಂದಿರುವ ಕಂಪನಿ ಲಕ್ಷಾಂತರ ಟನ್ ಅದಿರನ್ನು ಹೊರಗಿನವರಿಗೆ ಮಾರುತ್ತಿದೆ. ‘ರಾಜ್ಯದವರೇ ಆದ ಎಚ್.ಡಿ.ಕುಮಾರಸ್ವಾಮಿ ಉಕ್ಕು ಖಾತೆಯ ಕೇಂದ್ರ ಸಚಿವರು. ಕಾರ್ಖಾನೆ ಸ್ಥಾಪನೆಗೆ ಪೂರಕ ಅವಕಾಶಗಳಿವೆ. ಆದರೆ ಕಬ್ಬಿಣದ ಕಾರ್ಖಾನೆ ಸ್ಥಾಪಿಸಲು ಕ್ರಮಕೈಗೊಂಡಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.