ADVERTISEMENT

ಹೊಸಪೇಟೆ | ಬಿಟಿಪಿಎಸ್‌ ಕಾಮಗಾರಿ ಸ್ಥಗಿತ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

‘ಪ್ರಜಾವಾಣಿ’ ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 8:22 IST
Last Updated 28 ಅಕ್ಟೋಬರ್ 2020, 8:22 IST
ಬಿಟಿಪಿಎಸ್‌ ಕೈಗೆತ್ತಿಕೊಂಡಿರುವ ಕಾಮಗಾರಿ ಸ್ಥಳ ಪರಿಶೀಲಿಸಿದ ಅಧಿಕಾರಿಗಳು
ಬಿಟಿಪಿಎಸ್‌ ಕೈಗೆತ್ತಿಕೊಂಡಿರುವ ಕಾಮಗಾರಿ ಸ್ಥಳ ಪರಿಶೀಲಿಸಿದ ಅಧಿಕಾರಿಗಳು   

ಹೊಸಪೇಟೆ: ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದಿಂದ (ಬಿಟಿಪಿಎಸ್‌) ತಾಲ್ಲೂಕಿನ ಕಮಲಾಪುರ, ನಲ್ಲಾಪುರ ಸಮೀಪ ಕೈಗೆತ್ತಿಕೊಂಡಿರುವ ಪೈಪ್‌ಲೈನ್‌ ಕಾಮಗಾರಿ ಬುಧವಾರ ಸ್ಥಗಿತಗೊಂಡಿದೆ.

ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರದ ಆಯುಕ್ತ ಶೇಕ್‌ ತನ್ವೀರ್‌ ಆಸಿಫ್‌ ಅವರ ಸೂಚನೆ ಮೇರೆಗೆ ಅಧಿಕಾರಿಗಳು ಬುಧವಾರ ಈ ಕ್ರಮ ಕೈಗೊಂಡಿದ್ದಾರೆ.

‘ಬೆಳಿಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿರುವ ವರದಿ ನೋಡಿದ್ದೆ. ಬಳಿಕ ನನ್ನ ಸೂಚನೆ ಮೇರೆಗೆ, ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ಅಧಿಕಾರಿ ಮಂಜ ನಾಯ್ಕ, ಪಟ್ಟಣ ಪಂಚಾಯಿತಿ ಅಧಿಕಾರಿ ಎಚ್‌. ನಾಗೇಶ್‌, ಪ್ರಾಧಿಕಾರದ ಧನಂಜಯ, ಕಂದಾಯ ಇಲಾಖೆಯ ರವಿಚಂದ್ರ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಶಶಿಧರ್‌ ವೈ. ತಿಮ್ಮಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಕೋಟೆ ಗೋಡೆ ನಾಶಪಡಿಸಿರುವುದು ಗಮನಕ್ಕೆ ಬಂದಿದೆ. ಕಾಮಗಾರಿ ನಿಲ್ಲಿಸಲಾಗಿದೆ. ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿರುವ ಬಿಟಿಪಿಎಸ್‌ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಆಸಿಫ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಹೊಸಪೇಟೆ: ಬಿಟಿಪಿಎಸ್‌ ಪೈಪ್‌ಲೈನ್‌ ಕಾಮಗಾರಿಗೆ ಅಪಸ್ವರ’ ಶೀರ್ಷಿಕೆ ಅಡಿ ಬುಧವಾರ (ಅ.28) ‘ಪ್ರಜಾವಾಣಿ’ ವರದಿ ಪ್ರಕಟಿಸಿದೆ. ನಾರಾಯಣಪುರ ಜಲಾಶಯದಿಂದ ಕುಡಿತಿನಿಯ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದ (ಬಿಟಿಪಿಎಸ್‌) ವರೆಗೆ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ದೂರು: ‘ವಿಜಯನಗರ ಕಾಲದ ಕೋಟೆ ಗೋಡೆ ನಾಶಪಡಿಸಿ ಕಾಮಗಾರಿ ಕೈಗೆತ್ತಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಅವರು ಕಮಲಾಪುರ ಠಾಣೆಗೆ ಬುಧವಾರ ಲಿಖಿತ ದೂರು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.