ADVERTISEMENT

ಬಳ್ಳಾರಿ: ಮೊದಲ ದಿನ ಮುಷ್ಕರ ಬಹುತೇಕ ಯಶಸ್ವಿ

ಬಸ್‌ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 11:04 IST
Last Updated 8 ಜನವರಿ 2019, 11:04 IST
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರ ಧರಣಿ
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಆಶಾ ಕಾರ್ಯಕರ್ತೆಯರ ಧರಣಿ   

ಬಳ್ಳಾರಿ: ‘ಜನ ವಿರೋಧಿ ನೀತಿ ಆಡಳಿತ ನಡೆಸುತ್ತಿರುವ ಕೇಂದ್ರಬಿಜೆಪಿ ಸರ್ಕಾರದ ವಿರುದ್ಧ’ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಮಂಗಳವಾರದಿಂದ ಆರಂಭವಾದ ಮುಷ್ಕರ ಮೊದಲ ದಿನ ಜಿಲ್ಲೆಯಲ್ಲಿ ಬಹುತೇಕ ಯಶಸ್ವಿಯಾಯಿತು.

ಜಿಲ್ಲೆಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಜನ ಸಂಚಾರ ಕಡಿಮೆಯಾಗಿತ್ತು. ಆಟೋರಿಕ್ಷಾಗಳ ಸಂಚಾರವೂ ವಿರಳಾಗಿತ್ತು ರೈಲುಗಳು ಎಂದಿನಂತೆ ಸಂಚರಿಸಿದವು. ಹೋಟೆಲ್‌ಗಳು, ಚಿತ್ರಮಂದಿರಗಳು, ಬ್ಯಾಂಕ್‌ಗಳು ಮುಚ್ಚಿದ್ದವು. ರಸ್ತೆಬದಿ ಹೋಟೆಲ್‌ಗಳಲ್ಲಿ ಜನ ಹೊಟ್ಟೆತುಂಬಿಸಿಕೊಂಡರು. ಜಿಲ್ಲಾ ಕೇಂದ್ರವಾದ ನಗರದಲ್ಲಿ ಹೂ–ಹಣ್ಣಿನ ವ್ಯಾಪಾರ ಎಂದಿನಂತೆ ನಡೆಯಿತು. ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಕ್ಕೆ ತೊಂದರೆಯಾಗಲಿಲ್ಲ. ನಗರ ಸಾರಿಗೆ ಬಸ್‌ ನಿಲ್ದಾಣ ಮತ್ತು ಗ್ರಾಮಾಂತರ ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು.

ಜಿಲ್ಲಾ ಕೇಂದ್ರ ಹೊರತುಪಡಿಸಿ ಹಡಗಲಿ, ಕೊಟ್ಟೂರು, ಕೂಡ್ಲಿಗಿ, ಸಿರುಗುಪ್ಪ, ಹಗರಿಬೊಮ್ಮನಹಳ್ಳಿ ಕಂಪ್ಲಿ, ಕುರುಗೋಡಿನಲ್ಲಿ ಎಂದಿನಂತೆವ್ಯಾಪಾರ ಚಟುವಟಿಕೆಗಳು ನಡೆದವು. ಬಳ್ಳಾರಿ ಹಾಗೂ ಹೊಸಪೇಟೆಯಲ್ಲಿ ಮುಷ್ಕರ ಸಂಪೂರ್ಣವಾಗಿತ್ತು.ಸಂಘಟನೆಗಳ ಮುಖಂಡರು ಪ್ರಮುಖ ರಸ್ತೆ– ವೃತ್ತಗಳಲ್ಲಿ ಧರಣಿ, ಬೈಕ್‌ ರ್‌್ಯಾಲಿ ನಡೆಸಿದರು. ನಸುಕಿನಲ್ಲೇ ವಾಹನಗಳನ್ನು ತಡೆದು ಮುಷ್ಕರದ ಕುರಿತು ಜಾಗೃತಿ ಮೂಡಿಸಿದರು.

ADVERTISEMENT

ಟೈರ್‌ಗೆ ಬೆಂಕಿ: ನಗರದ ಗಡಿಗಿ ಚೆನ್ನಪ್ಪ ವೃತ್ತ ಮತ್ತು ಎಚ್‌.ಆರ್‌.ಗವಿಯಪ್ಪ ವೃತ್ತ ಪ್ರತಿಭಟನೆ, ಧರಣಿಗಳ ಕೇಂದ್ರಸ್ಥಾನವಾಗಿ ಮಾರ್ಪಟ್ಟಿತ್ತು. ಚೆನ್ನಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಸಾವಿರಾರುಕಾರ್ಮಿಕರು ಬಿರುಬಿಸಿಲನ್ನು ಲೆಕ್ಕಿಸದೆ ಧರಣಿ ನಡೆಸಿದರು. ವೃತ್ತದ ನಡುವೆ ನಿಂತ ಮುಖಂಡರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ವಾಹನ ಸಂಚಾರವನ್ನು ಸಂಪೂರ್ಣ ತಡೆಯಲಾಗಿತ್ತು.

ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಎಐಡಿಎಸ್‍ಓ,ಜನವಾದಿ ಮಹಿಳಾ ಸಂಘಟನೆ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯೊಂದಿಗೆ ಎರಡೂ ರೈತ ಸಂಘಗಳು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ–ಕೃಷಿ ಕಾರ್ಮಿಕರ ಸಂಘಟನೆ, ಅಖಿಲ ಭಾರತ ಕಿಸಾನ್ ಮಜ್ದೂರ್, ಕಿಸಾನ್ ಸ್ವರಾಜ್ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಂಘ, ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್‌ ನೌಕರರ ಮತ್ತು ಅಧಿಕಾರಿಗಳ ಸಂಘ, ವಿಮಾ ನೌಕರರ ಸಂಘ, ತುಂಗಭದ್ರಾ ರೈತ ಸಂಘ, ಜಿಲ್ಲಾ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ, ಅಂಚೆ ನೌಕರರ ಸಂಘದ ಸದಸ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.