ಹೊಸಪೇಟೆ: ಸಾರಿಗೆ ನೌಕರರ ಮುಷ್ಕರ ಕೊನೆಗೊಂಡಿದ್ದರಿಂದ ಭಾನುವಾರ ರಾತ್ರಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಸಂಚಾರ ಪುನರಾರಂಭಗೊಂಡಿದೆ.
ರಾತ್ರಿ 8.10ಕ್ಕೆ ಮೊದಲ ಬಸ್ ಪಣಜಿಗೆ ಪಯಣ ಬೆಳೆಸಿತು. ಅದಾದ ನಂತರ ರಾತ್ರಿ 9ಕ್ಕೆ ಹೈದರಾಬಾದ್ಗೆ ಸ್ಲೀಪರ್ ಬಸ್ ಪ್ರಯಾಣ ಬೆಳೆಸಿತು. ಮೂರು ದಿನಗಳಿಂದ ಮುಷ್ಕರ ನಡೆಯುತ್ತಿರುವುದರಿಂದ ಜನ ನಿಲ್ದಾಣದ ಕಡೆಗೆ ಸುಳಿದಿರಲಿಲ್ಲ. ಸಂಜೆ ಮುಷ್ಕರ ಕೊನೆಗೊಂಡಿರುವ ವಿಷಯ ಅನೇಕರಿಗೆ ಗೊತ್ತಾಗಲಿಲ್ಲ. ಹೀಗಾಗಿ ನಿಲ್ದಾಣದತ್ತ ಬರದೇ ಇರುವುದಕ್ಕೆ ಅದೂ ಕೂಡ ಮುಖ್ಯ ಕಾರಣ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರು ರಾತ್ರಿ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದರು. ‘ಈ ಮೊದಲೇ ದೂರದ ಊರುಗಳಿಗೆ ಟಿಕೆಟ್ ಕಾಯ್ದಿರಿಸಿದವರು ನಿಲ್ದಾಣಕ್ಕೆ ಬಂದು ಬಸ್ಸಿನಲ್ಲಿ ಹೋಗಿದ್ದಾರೆ. ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಬೇರೆಡೆಯೂ ಬಸ್ ಬಿಡಲಾಗುವುದು. ಈಗ ಪ್ರಯಾಣಿಕರು ಬರುವುದು ಅನುಮಾನ. ಹಾಗಾಗಿ ಬೆಳಿಗ್ಗೆ ಎಲ್ಲ ಕಡೆ ಬಸ್ ಬಿಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.