ADVERTISEMENT

ಬಂಜಾರರ ಮತಾಂತರಕ್ಕೆ ಹುನ್ನಾರ: ಸಮಾಜದ ಜನ ಜಾಗೃತರಾಗಲು ಓಂಕಾರ ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 3:27 IST
Last Updated 25 ಫೆಬ್ರುವರಿ 2024, 3:27 IST
ಅರಸೀಕೆರೆ ಹೋಬಳಿಯ ಕಡೆಕಲ್ ತಾಂಡದಲ್ಲಿ ಸಂತ ಸೇವಾಲಾಲ್ ಹಾಗೂ ಮಾರಿಯಮ್ಮ ದೇವಿ ದೇವಸ್ಥಾನ ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯರು ಆಶೀರ್ವಚನ ನೀಡಿದರು
ಅರಸೀಕೆರೆ ಹೋಬಳಿಯ ಕಡೆಕಲ್ ತಾಂಡದಲ್ಲಿ ಸಂತ ಸೇವಾಲಾಲ್ ಹಾಗೂ ಮಾರಿಯಮ್ಮ ದೇವಿ ದೇವಸ್ಥಾನ ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯರು ಆಶೀರ್ವಚನ ನೀಡಿದರು   

ಅರಸೀಕೆರೆ: ‘ಪೂರ್ವಜರು ತೋರಿದ ಸನ್ಮಾರ್ಗದಲ್ಲಿ ನಡೆಯುತ್ತಿರುವ ಬಂಜಾರ ಸಮುದಾಯ, ಸಾಮಾಜಿಕವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಅಭಿನಂದನಾರ್ಹ’ ಎಂದು ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯರು ಹೇಳಿದರು.

ಹೋಬಳಿಯ ಕಡೆಕಲ್ ತಾಂಡದಲ್ಲಿ ಸಂತ ಸೇವಾಲಾಲ್ ಹಾಗೂ ಮಾರಿಯಮ್ಮ ದೇವಿ ದೇವಸ್ಥಾನ ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಶ್ರಮಿಕರಾದ ಬಂಜಾರರು ಸಂಸ್ಕೃತಿ, ಸಂಸ್ಕಾರಗಳಿಂದ ಪ್ರಸಿದ್ಧಿ ಪಡೆದಿದ್ದಾರೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಸುಶಿಕ್ಷಿತರಾಗಬೇಕು. ಗುರು ಹಿರಿಯರನ್ನು ಗೌರವಿಸಿ, ಸಮಾಜದ ಮೂಲ ಧರ್ಮ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಲಂಬಾಣಿ ಸಮಾಜದ ದೀಕ್ಷಾ ಗುರು ಗೋಸಾಯಿ ಬಾವ ಮಾತನಾಡಿ, ‘ವಂಚನೆ, ಅಸೂಯೆ, ಕೇಡು ಬಯಸದೆ ಸಕಲ ಜೀವರಾಶಿಗಳಿಗೂ ಒಳಿತು ಬಯಸುವ ಲಂಬಾಣಿ ಸಮುದಾಯದ ಪರಂಪರೆ ಮಾದರಿಯಾಗಿದೆ. ಶತಮಾನದ ಹಿಂದೆ ಸೇವಾಲಾಲರು ನುಡಿದ ವಚನಗಳು ಇಂದು ಸತ್ಯವಾಗಿವೆ’ ಎಂದರು.

‘ತಾಂಡಾಗಳಲ್ಲಿನ ಬಡತನ, ಅನಕ್ಷರತೆ ಬಳಸಿಕೊಂಡ ಕೆಲವರು ಆಸೆ, ಆಮಿಷಗಳನ್ನು ತೋರಿಸಿ ಬೇರೆ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ. ನಮ್ಮ ಸಮಾಜದ ಸಂಸ್ಕೃತಿ, ಸಂಸ್ಕಾರಗಳ ಮೂಲಕ ಮಾದರಿ ಆಗಿರುವ ನಾವು, ಮತಾಂತರದ ವಿರುದ್ಧ ಹೋರಾಡಲು ಸಜ್ಜಾಗಬೇಕು’ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ಟಿ ಭರತ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ ಮಾತನಾಡಿದರು. ಬಾಲಚಂದ್ರಯ್ಯ, ಶಿವಣ್ಣ, ಹಟ್ಟಿ ಜಯನಾಯ್ಕ, ಡಾವೋ ಟಿಕ್ಯಾನಾಯ್ಕ, ಕಾರಭಾರಿ ಕೇಶ್ಯಾನಾಯ್ಕ, ಪೂಜಾರಿ ಚತ್ರ್ಯನಾಯ್ಕ, ಭೀಮ ನಾಯ್ಕ, ಎಸ್. ಮಂಜುನಾಥ್, ಶೆಟ್ಟಿನಾಯ್ಕ, ಹನುಮಂತಪ್ಪ, ಬಸಣ್ಣ, ಖುಬ್ಯಾ ನಾಯ್ಕ, ಲಕ್ಷ್ಮಣ ನಾಯ್ಕ, ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.